ಅಜ್ಜಿ ಬೈದಿದ್ದರಿಂದ ಕೀಟನಾಶಕ ಸೇವಿಸಿದ ಮೂರನೇ ತರಗತಿ ವಿದ್ಯಾರ್ಥಿ
ಶುಕ್ರವಾರ, 29 ಜನವರಿ 2016 (21:55 IST)
ಆಘಾತಕಾರಿ ಘಟನೆಯೊಂದರಲ್ಲಿ ಶಾಲೆಗೆ ಹೋಗದಿರುವ ಕಾರಣಕ್ಕೆ ಅಜ್ಜಿ ಬೈದಿದ್ದರಿಂದ 9 ವರ್ಷದ ಬಾಲಕ ಕೀಟನಾಶಕ ಸೇವಿಸಿರುವ ಘಟನೆ ಭೂಸಾವರ್ ಪಟ್ಟಣದಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಮೂರನೇ ತರಗತಿಯ ವಿದ್ಯಾರ್ಥಿಯಾದ ಪಿಂಟು ಪರೀಕ್ಷೆ ಬರೆಯಲು ನಿರಾಕರಿಸಿದ್ದರಿಂದ ಕೋಪಗೊಂಡ ಅಜ್ಜಿ ನಾಲ್ಕು ಏಟು ಬಾರಿಸಿ, ನಿಂದಿಸಿದ್ದಳು ಎನ್ನಲಾಗಿದೆ. ಇದರಿಂದ ಕೋಪಗೊಂಡ ಬಾಲಕ ಮನೆಯಲ್ಲಿದ್ದ ಕೀಟನಾಶಕ ಸೇವಿಸಿದ್ದನು ಎಂದು ಮೂಲಗಳು ತಿಳಿಸಿವೆ.
ಕೀಟನಾಶಕ ಸೇವಿಸಿ ಶಾಲೆಗೆ ತೆರಳಿದ್ದ ಬಾಲಕನ ಆರೋಗ್ಯದಲ್ಲಿ ಏರುಪೇರು ಆಗಿರುವುದನ್ನು ಕಂಡ ಶಿಕ್ಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನನ್ನು ಪರೀಕ್ಷಿಸಿದ ವೈದ್ಯರು ಇದೊಂದು ಆತ್ಮಹತ್ಯಾ ಪ್ರಯತ್ನ ಎಂದು ಹೇಳಿದ್ದಾರೆ.ನಂತರ ಆತನಿಗೆ ಚಿಕಿತ್ಸೆ ನೀಡಲಾಯಿತು. ಇದೀಗ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಪಿಂಟುವಿನ ತಂದೆ ತಾಯಿ ಜೈಪುರದಲ್ಲಿ ದಿನಗೂಲಿ ಕಾರ್ಮಿಕರಾಗಿದ್ದರಿಂದ ಬಾಲಕ ಅಜ್ಜಿಯೊಂದಿಗೆ ವಾಸವಾಗಿದ್ದಾನೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.