ಅಮಾನತು ವಿರೋಧಿಸಿ ಕಪ್ಪು ಪಟ್ಟಿ ಧರಣಿ ಮುಂದುವರೆಸಿದ ಕಾಂಗ್ರೆಸ್

ಬುಧವಾರ, 5 ಆಗಸ್ಟ್ 2015 (11:31 IST)
ಕಾಂಗ್ರೆಸ್ ಪಕ್ಷದ 25 ಜನರನ್ನು ಅಮಾನತುಗೊಳಿಸಿರುವ ಸ್ಪೀಕರ್ ಸುಮಿತ್ರಾ ಮಹಾಜನ್ ಕ್ರಮವನ್ನು ಖಂಡಿಸಿ ಮಂಗಳವಾರವಿಡಿ ಪ್ರತಿಭಟನೆಯನ್ನು ನಡೆಸಿದ್ದ ಕಾಂಗ್ರೆಸ್ ಇಂದು ಸಹ  ಕಪ್ಪು ಪಟ್ಟಿ ಧರಿಸಿ ಧರಣಿಯನ್ನು ಮುಂದುವರೆಸಿದೆ.
 
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ  ಸಂಸತ್ ಭವನದ ಮುಂದಿರುವ ಗಾಂಧಿ ಪ್ರತಿಮೆಯ ಬಳಿ ಕಾಂಗ್ರೆಸ್ ಪ್ರತಿಭಟನೆಯನ್ನು ಕೈಗೊಂಡಿದೆ. ಕಾಂಗ್ರೆಸ್ ಪಕ್ಷದ ಲೋಕಸಭಾ ಮತ್ತು ರಾಜ್ಯಸಭಾ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಜೆಡಿಯು, ಎನ್‌ಸಿಪಿ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಕಾಂಗ್ರೆಸ್‌ಗೆ ಬೆಂಬಲವನ್ನು ಮುಂದುವರೆಸಿದ್ದು ಸದನದ ಹೊರಗೆ ಮತ್ತು ಒಳಗೆ ಪ್ರತಿಭಟನೆಯನ್ನು ಕೈಗೊಂಡಿವೆ. 
 
ಕೆಲವು ವಿರೋಧ ಪಕ್ಷಗಳ ನಾಯಕರು ಸ್ಪೀಕರ್ ಅವರನ್ನು ಭೇಟಿಯಾಗಿ ಅಮಾನತು ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಸಭೆ ಕರೆದಿರುವ ಸುಮಿತ್ರಾ ಮಹಾಜನ್ ಅಮಾನತು ಕ್ರಮವನ್ನು ಮರುಪರಿಶೀಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 
 
ಇಂದು ಮಹಾಜನ್  ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 
 
ರಾಜ್ಯಸಭೆಯಲ್ಲಿ ಸಹ ವಿರೋಧ ಪಕ್ಷಗಳು ಅಮಾತನು ಆದೇಶವನ್ನು ವಿರೋಧಿಸಿ ಗದ್ದಲ ಮುಂದುವರೆಸಿದ್ದರಿಂದ ಕಲಾಪವನ್ನು ಮಧ್ಯಾಹ್ನ  12 ಗಂಟೆಗೆ ಮುಂದೂಡಲಾಗಿದೆ. 

ವೆಬ್ದುನಿಯಾವನ್ನು ಓದಿ