ರಾಯಭಾರಿಯಾಗಲು ರಾಮದೇವ್‌ಗೆ ಶೈಕ್ಷಣಿಕ ಅರ್ಹತೆಯಿದೆಯೇ : ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

ಸೋಮವಾರ, 27 ಏಪ್ರಿಲ್ 2015 (17:07 IST)
ಯೋಗಗುರು ಬಾಬಾ ರಾಮದೇವ್ ಅವರನ್ನು ಹರಿಯಾಣಾದಲ್ಲಿ ಯೋಗ ಮತ್ತು ಆಯುರ್ವೇದದ ರಾಯಭಾರಿಯಾಗಿ ಘೋಷಿಸ ಹೊರಟಿರುವ ಹರಿಯಾಣಾ ಸರಕಾರಕ್ಕೆ ಛೀಮಾರಿ ಹಾಕಿರುವ ಕಾಂಗ್ರೆಸ್, ಬಾಬಾರ ಶೈಕ್ಷಣಿಕ ಅರ್ಹತೆಯನ್ನು ಪ್ರಶ್ನಿಸಿದೆ. 
 
ಸರಕಾರ ಈ ನಿರ್ಧಾರವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿರುವ ಹರಿಯಾಣಾದ ಮಾಜಿ ಮುಖ್ಯಮಂತ್ರಿ ಸಂಪತ್ ಸಿಂಗ್, ಬಾಬಾ ಔಪಚಾರಿಕ ಶಿಕ್ಷಣವನ್ನು ಸಹ ಪಡೆದಿಲ್ಲವಾದ್ದರಿಂದ ಅವರನ್ನು ರಾಯಭಾರಿಯನ್ನಾಗಿಸುವುದು ಸಮರ್ಥನೀಯವಲ್ಲ ಎಂದು  ಹೇಳಿದ್ದಾರೆ. ಗುರುಕುಲಗಳ ಹೆಸರನ್ನು ಆಚಾರ್ಯಕುಲಂ ಎಂದು ಮರು ನಾಮಕರಣ ಮಾಡ ಹೊರಟಿರುವ ಮನೋಹರ ಲಾಲ್ ಕಟ್ಟರ್ ನೇತೃತ್ವದ ಸರಕಾರವನ್ನು ಸಹ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. 
 
ಪದವಿ ವಿದ್ಯಾಭ್ಯಾಸವನ್ನು ಸಹ ಪೂರೈಸದ ರಾಮದೇವ್ ಅವರನ್ನು ರಾಯಭಾರಿಯಾಗಿ ನೇಮಿಸುವ ನಿರ್ಧಾರವನ್ನು ಸರಕಾರ ಹಿಂದಕ್ಕೆ ಪಡೆಯಬೇಕು. ರಾಜ್ಯದಲ್ಲಿ ಯೋಗವನ್ನು ಅಭ್ಯಾಸ ಮಾಡುತ್ತಿರುವ ಮತ್ತು ಬೋಧಿಸುತ್ತಿರುವ ಹಲವು ಜನರು ಶೈಕ್ಷಣಿಕವಾಗಿ ಅತ್ಯಂತ ಅರ್ಹರು ಮತ್ತು ಡಾಕ್ಟರೇಟ್ ಪದವಿಗಳನ್ನು ಸಹ ಪಡೆದಿದ್ದಾರೆ. ರಾಮದೇವ್ ಅವರ ನೇಮಕ ಒಂದು ತಮಾಷೆಯಂತೆ ಭಾಸವಾಗಬಹುದು. ಸರಕಾರ ಅರ್ಹ ವೈದ್ಯರಿಗೆ ಮತ್ತು ತರಬೇತುದಾರರಿಗೆ ಅವಕಾಶ ಕಲ್ಪಿಸಬೇಕು ಎಂದು ಮಾಜಿ ಸಿಎಂ ಒತ್ತಾಯಿಸಿದ್ದಾರೆ. 
 
ಹರಿಯಾಣಾದ ಬಿಜೆಪಿ ಸರಕಾರ ಯೋಗಗುರು ಅವರಿಗೆ ಕ್ಯಾಬಿನೇಟ್ ದರ್ಜೆ ಸಚಿವ ಸ್ಥಾನವನ್ನು ಸಹ ನೀಡಲು ಮುಂದಾಗಿತ್ತು. ಆದರೆ ಬಾಬಾ ಅದನ್ನು ನಯವಾಗಿ ನಿರಾಕರಿಸಿದ್ದರು. 

ವೆಬ್ದುನಿಯಾವನ್ನು ಓದಿ