ಮದ್ಯದಲ್ಲಿ ಬೆರೆಸಲು ನೀರು ಕೊಡದ ಪೇದೆಯನ್ನು ಗುಂಡಿಟ್ಟು ಕೊಂದ ಆರೋಪಿಗಳು

ಗುರುವಾರ, 26 ನವೆಂಬರ್ 2015 (14:25 IST)
ಮದ್ಯದಲ್ಲಿ ಬೆರೆಸುವುದಕ್ಕಾಗಿ ನೀರು  ಕೊಡಲು ನಿರಾಕರಿಸಿದ ಪೊಲೀಸ್ ಪೇದೆಯನ್ನು ಮೂವರು ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ ದಾರುಣ ಘಟನೆ ನಗರದ ಲೋನಿ ಪ್ರದೇಶದಲ್ಲಿ ವರದಿಯಾಗಿದೆ
 
ಹತನಾದ ಪೊಲೀಸ್ ಪೇದೆ ಲೋನಿಯ ಬಂತಾಲಾ ಪೊಲೀಸ್ ಠಾಣೆಯಲ್ಲಿ ಕಾರ್ನಿರ್ವಹಿಸುತ್ತಿದ್ದ 32 ವರ್ಷ ವಯಸ್ಸಿನ ಸುರೇಶ್ ಯಾದವ್  ಎಂದು ಗುರುತಿಸಲಾಗಿದೆ.
 
ಮದ್ಯ ಸೇವಿಸಿದ ಮತ್ತಿನಲ್ಲಿದ್ದ ಮೂವರು ವ್ಯಕ್ತಿಗಳು, ಪೊಲೀಸ್ ಪೇದೆಗೆ ಮದ್ಯದಲ್ಲಿ ಬೆರೆಸಲು ನೀರು ಕೊಡುವಂತೆ ಒತ್ತಾಯಿಸಿದ್ದಾರೆ. ಆದರೆ, ಪೇದೆ ನೀರು ಕೊಡಲು ನಿರಾಕರಿಸಿದಾಗ ಪರಸ್ಪರ ವಾಗ್ವಾದ ವಿಕೋಪಕ್ಕೆ ತೆರಳಿದಾಗ ಆರೋಪಿಗಳು ಪೇದೆಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
 
ಚೌಕಿ ಪೊಲೀಸ್ ಠಾಣೆಯ ಸಬ್ ಇನ್ಸೆಪೆಕ್ಟರ್ ಸುಭಾಷ್ ಅತ್ರಿ ಮಾತನಾಡಿ, ವಿವಾಹ ಸಮಾರಂಭಕ್ಕೆ ಅಡ್ಡಿಪಡಿಸುತ್ತಿದ್ದ ಮೂವರು ವ್ಯಕ್ತಿಗಳನ್ನು ಹೊರಹಾಕಲು ಪೇದೆ ಯತ್ನಿಸಿದಾಗ, ಒಬ್ಬ ಆರೋಪಿ, ಪೇದೆಯ ಎದೆಗೆ ಗುಂಡು ಹಾರಿಸಿದ್ದರಿಂದ ಪೇದೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. 
 
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ