ಕಾರ್ಪೊರೇಟ್ ಬೇಹುಗಾರಿಕೆ ಪ್ರಕರಣ: ಮೋತ್ತೋರ್ವ ಆರೋಪಿ ಬಂಧನ

ಗುರುವಾರ, 26 ಫೆಬ್ರವರಿ 2015 (12:38 IST)
ಕೇಂದ್ರ ಸರ್ಕಾರದ ಕಾರ್ಪೊರೇಟ್ ಬೇಹುಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಅಪರಾಧ ವಿಭಾಗ ಪೊಲೀಸರು ಇಂದು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು, ಆರೋಪಿಯನ್ನು ಪರಿಸರ ಇಲಾಖೆಯ ಜಂಟಿ ಕಾರ್ಯದರ್ಶಿ ಪಿ.ಎ.ಜಿತೇಂದ್ರ ನಾಗ್‌ಪಾಲ್ ಎಂದು ತಿಳಿಸಿದ್ದಾರೆ.  
 
ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಪೊಲೀಸರು, ಆರೋಪಿ ನಾಗ್‌ಪಾಲ್ ಇಲಾಖೆಯ ಮಹತ್ವದ ಮಾಹಿತಿಗಳನ್ನು ಪ್ರಕರಣದ ಪ್ರಮುಖ ಆರೋಪಿ ಲೋಕೇಶ್‌ಗೆ ನೀಡುತ್ತಿದ್ದರು. ಇದು ತನಿಖೆ ಅವಧಿಯಲ್ಲಿ ನಡೆಸಿದ ದಾಖಲೆಗಳ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಹಾಗಾಗಿ ನಾಗ್‌ಪಾಲ್ ಅವರನ್ನು ಬಂಧಿಸಲಾಗಿದೆ ಎಂದರು. 
 
ಪ್ರಕರಣದ ಹಿನ್ನೆಲೆ: ಈ ಬಂಧಿತ ಆರೋಪಿಗಳು ಕೇಂದ್ರ ಸರ್ಕಾರದ ಪೆಟ್ರೋಲಿಯಂ ಹಾಗೂ ವಿದ್ಯುತ್ ಇಲಾಖೆಯ ಅತ್ಯಂತ ಗೌಪ್ಯ ಮಾಹಿತಿಗಳನ್ನು ಹಣದ ಆಸೆಗಾಗಿ ಖಾಸಗಿ ವಯಕ್ಕೆ ಮಾರಿದ್ದಾರೆ. ಅಷ್ಟೇಅಲ್ಲದೆ ಮಾಹಿತಿಗಳನ್ನು ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಾ ದೇಶಗಳಿಗೂ ರವಾನಿಸಿದ್ದಾರೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಹಲವು ಆರೋಪಿಗಳನ್ನು ಬಂಧಿಸಿದ್ದರು. 
 
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 16 ಮಂದಿ ಆರೋಪಿಗಳನ್ನು ಬಂಧಿಸಿದಂತಾಗಿದ್ದು, ಬಂಧಿತರಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು, ಓರ್ವ ಪತ್ರಕರ್ತ ಹಾಗೂ ರಾಷ್ಟ್ರದ ಪ್ರತಿಷ್ಟಿತ ಕಂಪನಿಯಾದ ರಿಯಾಯನ್ಸ್ ಕಂಪನಿಯ ಉದ್ಯಮಿಗಳು ಸೇರಿದಂತೆ ಇತರರು ಭಾಗಿಯಾಗಿದ್ದಾರೆ ಎನ್ನಲಾಗಿದೆ.  
 
ಈ ಆರೋಪಿಗಳು ಬಹಿರಂಗಪಡಿಸಿರುವ ಮಾಹಿತಿಯಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿದ್ದ ಪೊಟ್ರೋಲಿಯಂ ಹಾಗೂ ವಿದ್ಯುತ್ ಖರೀದಿ, ಅವುಗಳ ಬೆಲೆ ನಿಗಧಿ, ಬಳಕೆ ಹಾಗೂ ಮಾರಾಟ ದರ ಸೇರಿದಂತೆ ಇನ್ನಿತರೆ ಅಂಶಗಳು ಒಳಗೊಂಡಿದ್ದವು ಎನ್ನಲಾಗಿದ್ದು, ಈ ಮಾಹಿತಿಗಳನ್ನು ಆಂತರಿಕ ಸುರಕ್ಷತೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಬಹಿರಂಗಪಡಿಸುವಂತಿಲ್ಲ ಎಂಬುದು ಸರ್ಕಾರದ ನಿಯಮ. ಆದರೆ ಹಣದ ಆಸೆಗಾಗಿ ಆರೋಪಿಗಳು ಕೆಲ ಗೌಪ್ಯ ಮಾಹಿತಿಗಳನ್ನು ಇಲಾಖೆಗಲಿಂದ ಕದ್ದು, ಬಹಿರಂಗಗೊಳಿಸುತ್ತಿದ್ದರು ಎಂಬ ಆಱೋಪವಿದ್ದು, ಇದು ಸುಮಾರು 10000 ಕೋಟಿ ಬೃಹತ್ ಮೊತ್ತದ ಹಗರಣ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ