ಶಿಕ್ಷಣ ಮುಂದುವರಿಸಲು ಬಯಸಿದ ದಲಿತ ವಿದ್ಯಾರ್ಥಿನಿಯನ್ನು ಸಜೀವವಾಗಿ ದಹಿಸಿದ ಕುಟುಂಬದ ಸದಸ್ಯರು

ಶುಕ್ರವಾರ, 6 ಮಾರ್ಚ್ 2015 (14:48 IST)
ಪಿಯುಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಸಿದ್ದತೆ ನಡೆಸುತ್ತಿದ್ದ 17 ವರ್ಷ ವಯಸ್ಸಿನ ದಲಿತ ವಿದ್ಯಾರ್ಥಿನಿಯನ್ನು ನಾಲ್ಕು ಮಂದಿ ಆರೋಪಿಗಳು ಸಜೀವವಾಗಿ ದಹಿಸಿದ ಘಟನೆ ಖುಷಿನಗರ್ ಜಿಲ್ಲೆಯ ಪಟ್ಟಾರ್‌ದೇವಾ ಗ್ರಾಮದಿಂದ ವರದಿಯಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ವಿದ್ಯಾರ್ಥಿನಿ ಮನೆಯಲ್ಲಿ ಅಡುಗೆ ಮಾಡುವಲ್ಲಿ ನಿರತಳಾಗಿದ್ದಾಗ ಆಕೆಯ ತಂದೆ ರಾಮ್ ಪರ್ವೇಶ್ ಯಾದವ್ ಮತ್ತು ಸಹೋದರರಾದ ಅರವಿಂದ್, ದಿನೇಶ್, ಧೀರಜ್ ಯಾದವ್ ಆಕೆಯನ್ನು ಮನೆಯಿಂದ ಹೊರಗೆ ತಂದು ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿದ್ದಾರೆ ಎನ್ನಲಾಗಿದೆ.  

ನನ್ನ ಸಹೋದರರು ಪ್ರತಿ ವರ್ಷ ಶಾಲೆಯಲ್ಲಿ ಫೇಲ್ ಆಗುತ್ತಿದ್ದರಿಂದ ನಾನು ಶಿಕ್ಷಣ ಮುಂದುವರಿಸುವುದು ನನ್ನ ತಂದೆಗೆ ಹಾಗೂ ಸಹೋದರರಿಗೆ ಬೇಕಾಗಿರಲಿಲ್ಲ. ಆದ್ದರಿಂದ ಕೋಪಗೊಂಡ ಕುಟುಂಬದ ಸದಸ್ಯರು ನನ್ನನ್ನು ಬೆಂಕಿ ಹಚ್ಚಿ ಸಜೀವವಾಗಿ ದಹಿಸುವ ಪ್ರಯತ್ನ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಏತನ್ಮಧ್ಯೆ, ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಪಿ.ಕೆ.ತ್ರಿಪಾಠಿ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ