ಮದುವೆಯನ್ನು ವಿರೋಧಿಸಿದ ತಮ್ಮನನ್ನು ಪ್ರೇಮಿಯ ಜತೆ ಸೇರಿಕೊಂಡು ಕೊಂದ ಅಕ್ಕ

ಶುಕ್ರವಾರ, 25 ಜುಲೈ 2014 (18:01 IST)
ತನ್ನ ಮದುವೆಯನ್ನು ವಿರೋಧಿಸಿದ ತಮ್ಮನನ್ನು ಪ್ರಿಯಕರನ ಜತೆ ಸೇರಿ ಅಕ್ಕನೇ ಕೊಲೆಗೊಯ್ದ ಅಮಾನವೀಯ ಘಟನೆ ವಾಯುವ್ಯ ದೆಹಲಿಯ ರಾಣಿ ಬಾಗ್ ಪ್ರದೇಶದಲ್ಲಿ ನಡೆದಿದೆ.

ಮುಲ್ತಾನಿ ಮೊಹಲ್ಲಾದಲ್ಲಿರುವ ತಮ್ಮ ಮನೆಯಲ್ಲಿಯೇ ಹರಿತವಾದ ಆಯುಧದಿಂದ 19 ವರ್ಷದ ತೇಜ್‌ಯಶ್‌ನನ್ನು ಹಲವು ಬಾರಿ ಇರಿದು ಆತನ ಗಂಟಲು ಸೀಳಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
  
ಕೊಲೆಯಾದ ದುರ್ದೈವಿಯ ಹಿರಿಯ ಸಹೋದರಿ ನವಪ್ರೀತ್ ಕೌರ್ ಎಂಬಾಕೆ ವರುಣ್ ಚೌಹಾನ್( 27)  ಎಂಬಾತನನ್ನು 7 ವರ್ಷಗಳಿಂದ ಪ್ರೀತಿಸುತ್ತಿದ್ದಳು. ಅವರಿಬ್ಬರ ಮದುವೆಗೆ ಆಕೆಯ ಮನೆಯ ಕಡೆಯಿಂದ ಮುಖ್ಯವಾಗಿ ಕೊಲೆಯಾದ ತಮ್ಮ ತೇಜ್‌ಯಶ್ ಕಡೆಯಿಂದ ಬಹಳ ವಿರೋಧವಿತ್ತು.
 
ತಮ್ಮ ದಾರಿಗೆ ಅಡ್ಡವಾಗಿರುವ ತೇಜ್‌ಯಶ್‌ನ ಜೀವ ತೆಗೆದರೆ ಆತನ ಮರಣದ ನಂತರ ಹೆತ್ತವರು ತಮ್ಮ ಸಂಬಂಧವನ್ನು ಒಪ್ಪಿಕೊಳ್ಳಬಹುದು ಎಂದು ಆಲೋಚಿಸಿದ ಪ್ರೇಮಿಗಳಿಬ್ಬರು ಆತನ ಹತ್ಯೆಗೆ ಸಂಚು ರೂಪಿಸಿದರು. ಯೋಜನೆಯಂತೆ ತಂದೆ ತಾಯಿಗಳಿಬ್ಬರು ಇಲ್ಲದ ಸಮಯದಲ್ಲಿ ಬೆಳಿಗ್ಗೆ 9 ರ ಸುಮಾರಿಗೆ ನವಪ್ರೀತ್ ಮನೆಗೆ ಬಂದ ಆಕೆಯ ಪ್ರೇಮಿ, ಹರಿತವಾದ ಚಾಕುವಿನಿಂದ ಮಲಗಿದ್ದ ಯುವಕನ ಮೇಲೆ ದಾಳಿ ಮಾಡಿದ. ತಕ್ಷಣ ಎದ್ದ ತೇಜ್‌ಯಶ್‌ ಪ್ರತಿಭಟಿಸಿದ. ಇಬ್ಬರ ನಡುವೆ ತೀವೃ ಹೋರಾಟ ನಡೆಯಿತು. ಆದರೆ ಕೊನೆಗೂ ಪ್ರೇಮಿಯ ತಮ್ಮನನ್ನು ಕೊಲ್ಲಲು ವರುಣ್ ಚೌಹಾನ್ ಯಶಸ್ವಿಯಾದ. 
 
ಗಂಭೀರವಾಗಿ ಗಾಯಗೊಂಡ ಆತನನ್ನು 10.30 ರ ಸುಮಾರಿಗೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತನಾಗಲೇ ಮೃತ ಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. ಆರೋಪಿಗಳಿಬ್ಬರನ್ನು ಬಂಧಿಸಲಾಗಿದ್ದು, ಅವರ ಮೇಲೆ ಕೊಲೆ ಕೇಸ್ ದಾಖಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಪೋಲಿಸರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ