ಭಿಕ್ಷೆ ನೀಡದ್ದಕ್ಕೆ ಭೀಕರವಾಗಿ ಕೊಲೆ ಮಾಡಿದ ಪುಟ್ಟ ಬಾಲಕರು

ಸೋಮವಾರ, 25 ಮೇ 2015 (12:05 IST)
ಭಿಕ್ಷೆ ನೀಡದಿದ್ದುದಕ್ಕೆ ಪ್ರಾರಂಭವಾದ ವಿವಾದ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ನವದೆಹಲಿಯಲ್ಲಿ ನಡೆದಿದೆ. ಆಘಾತಕಾರಿ ಸಂಗತಿ ಎಂದರೆ ಕೊಲೆಗಾರರು 9 ರಿಂದ 10 ವರ್ಷದ ಪ್ರಾಯದವರಾಗಿದ್ದಾರೆ. ಬಿಯರ್ ಬಾಟಲ್‌ನಿಂದ ಕುತ್ತಿಗೆಯನ್ನು ಕತ್ತರಿಸಿ ಹತ್ಯೆಯನ್ನೆಸಗಲಾಗಿದೆ. 

ದಕ್ಷಿಣ ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿ ಶುಕ್ರವಾರ ರಾತ್ರಿ  ಈ ಘಟನೆ ನಡೆದಿದೆ. ಇಬ್ಬರು ಅಪ್ರಾಪ್ತ ಬಾಲಕರಿಂದ ಹಲ್ಲೆಗೊಳಗಾದ ಸಂಜಯ್ ಕುಮಾರ್ (23) ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದನಾದರೂ ಅಧಿಕ ರಕ್ತಸ್ರಾವದಿಂದಾಗಿ ಆತ ಸಾವನ್ನಪ್ಪಿದ. 
 
ಕಾಲಕಾಜಿ ಮಂದಿರದ ಬಳಿ ಹೂವಿನ ಅಂಗಡಿ ಇಟ್ಟುಕೊಂಡಿದ್ದ ಸಂಜಯ್, ಪಕ್ಕದ ಅಂಗಡಿಯ ಬಳಿ ಮದ್ಯ ಕುಡಿಯುತ್ತಿದ್ದ. ಆ ಸಮಯದಲ್ಲಿ ಅಲ್ಲಿಗೆ ಬಂದ ಇಬ್ಬರು ಬಾಲಕರು ಆತನ ಬಳಿ ಭಿಕ್ಷೆಯನ್ನು ಕೇಳಿದ್ದಾರೆ. ಆತ ಭಿಕ್ಷೆ ಹಾಕಲು ನಿರಾಕರಿಸಿದಾಗ ಮಕ್ಕಳು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸಿಟ್ಟಿಗೆದ್ದ ಸಂಜಯ್ ಅವರಲ್ಲಿ ಒಬ್ಬನ ಕೆನ್ನೆಗೆ ಬಾರಿಸಿದ್ದಾನೆ. ಹೀಗಾಗಿ ವಿವಾದ ತಾರಕಕ್ಕೇರಿ ಬಿಯರ್ ಬಾಟಲ್‌ನಿಂದ ಒಬ್ಬ ಬಾಲಕ ಸಂಜಯ್ ತಲೆಗೆ ಹೊಡೆದಿದ್ದಾನೆ. ಇನ್ನೊಬ್ಬ ಬಾಲಕ ಆ ಬಿಯರ್ ಬಾಟಲ್ ಎತ್ತಿಕೊಂಡು ಕುತ್ತಿಗೆಯನ್ನೇ ಕತ್ತರಿಸಿದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 
 
ಇಬ್ಬರು ತಮ್ಮ ವಯಸ್ಸಿಗೆ ಮೀರಿ ಕ್ರೌರ್ಯವನ್ನು ಪ್ರದರ್ಶಿಸಿದರು. ಕೆಳಕ್ಕೆ ಬಿದ್ದ ಸಂಜಯ್‌ನ ಎದೆ ಮೇಲೆ ಕುಳಿತ ಬಾಲಕ ಕುತ್ತಿಗೆಯನ್ನು ಒಡೆದ ಬಿಯರ್ ಬಾಟಲ್‌ನಿಂದ ಕತ್ತರಿಸಿದ. ಆತನನ್ನು ಒದ್ದು ಸಂಜಯ್ ಓಡಿ ಹೋಗಲು ಪ್ರಯತ್ನಿಸದನಾದರೂ ರಕ್ತಸ್ರಾವದಿಂದಾಗಿ ಸ್ಥಳದಲ್ಲಿಯೇ ಅಸುನೀಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ