ಸಣಕಲಾಗಿದ್ದಕ್ಕೆ ಕೆಲಸ ಕಳೆದುಕೊಂಡು ನೊಂದ ಗಗನಸಖಿ ಆತ್ಮಹತ್ಯೆ

ಶುಕ್ರವಾರ, 25 ಜುಲೈ 2014 (16:17 IST)
ದೈಹಿಕವಾಗಿ ತುಂಬ ಸಣಕಲಾದ ಕಾರಣಕ್ಕೆ ಕೆಲಸದಿಂದ ವಜಾಗೊಳಿಸಲ್ಪಟ್ಟ ಗಗನಸಖಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಪೂರ್ವ ದೆಹಲಿಯಲ್ಲಿ ವರದಿಯಾಗಿದೆ.


 
ಅರುಣಾ ಸಿಂಗ್ ಎಂಬ ಹೆಸರಿನ 24 ವರ್ಷದ ಆಕೆ ಖಾಸಗಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.  ದೈಹಿಕವಾಗಿ ಅತಿ ಸಣಕಲಾದ ಕಾರಣಕ್ಕೆ ಕೆಲಸದಿಂದ ವಜಾ ಮಾಡಿದ್ದರಿಂದ ನೊಂದಿದ್ದ ಆಕೆ ಕಳೆದ ನಾಲ್ಕು ತಿಂಗಳಿಂದ ಖಿನ್ನತೆಗೊಳಗಾಗಿದ್ದಳು ಎಂದು ವರದಿಯಾಗಿದೆ. 
 
ಅರುಣಾಳ ಶವ ಆಕೆಯ ಕೋಣೆಯಲ್ಲಿನ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂತು ಎಂದು ಪೋಲಿಸರು ತಿಳಿಸಿದ್ದಾರೆ. 
 
ಕೆಲಸದಿಂದ ವಜಾಗೊಂಡ ನಂತರ ಆಕೆ  ತೂಕವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಳು.ಅಲ್ಲದೇ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಇಂಗ್ಲೀಷ್ ಭಾಷಾ ತರಗತಿಗೆ ಹೋಗುತ್ತಿದ್ದಳು ಎಂದು ಆಕೆಯ ಕುಟುಂಬದ ಮೂಲಗಳು ತಿಳಿಸಿವೆ. 
 
ನೇಣು ಬಿಗಿದುಕೊಳ್ಳುವ ಮೊದಲು ತನ್ನ ಸಹೋದರಿಯ ಜತೆ ಮಾತನಾಡಿದ್ದ ಅರುಣಾ, ನಂತರ ತನ್ನ ಕೋಣೆಯೊಳಕ್ಕೆ ಹೋಗಿ ಬಾಗಿಲು ಹಾಕಿಕೊಂಡಳು ಎಂದು ತಿಳಿದು ಬಂದಿದೆ
 
ಆತ್ಮಹತ್ಯೆಗೆ ಶರಣಾದ ಯುವತಿ ಮರಣೋತ್ತರ ಪರೀಕ್ಷೆ ಇಂದು ನಡೆಸಲಾಗುತ್ತಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ