ಇಂದು ದೆಹಲಿ ಸರಕಾರದಿಂದ 2ನೇ ಹಂತದ ಸಮ-ಬೆಸ ಸಾರಿಗೆ ಯೋಜನೆ ಜಾರಿ ಘೋಷಣೆ
ಬುಧವಾರ, 10 ಫೆಬ್ರವರಿ 2016 (15:10 IST)
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತ್ವದ ದೆಹಲಿ ಸರಕಾರ ಸಮ-ಬೆಸ ಸಂಖ್ಯೆಯ ಸಾರಿಗೆ ಯೋಜನೆಯ ಎರಡನೇ ಹಂತವನ್ನು ಜಾರಿಗೊಳಿಸಲು ಇಂದು ಪರಿಷ್ಕರಣಾ ಸಭೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಸರಕಾರಿ ಮೂಲಗಳ ಪ್ರಕಾರ, ಸಮ-ಬೆಸ ಸಾರಿಗೆ ಯೋಜನೆ ಕುರಿತಂತೆ 1,82000 ಮಿಸ್ಡ್ ಕಾಲ್ಗಳು ಬಂದಿದ್ದು, ಆನ್ಲೈನ್ ಮೂಲಕ 28300 ಸಲಹೆಗಳು ಬಂದಿವೆ ಎನ್ನಲಾಗಿದೆ. 9 ಸಾವಿರ ಇ-ಮೇಲ್ಗಳು ಬಂದಿವೆ.
ದೆಹಲಿ ಸಾರಿಗೆ ಇಲಾಖೆ ಸಮ- ಬೆಸ ಜಾರಿ ಕುರಿತಂತೆ ದೆಹಲಿಯ ಸುಮಾರು 10 ಲಕ್ಷ ಜನತೆಗೆ ದೂರವಾಣಿ ಕರೆ ಮಾಡಿ ಅಭಿಪ್ರಾಯ ಪಡೆದಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಿಎಂ ಕೇಜ್ರಿವಾಲ್ ಪರಿಷ್ಕರಣೆ ಸಭೆ ನಡೆಸಲಿದ್ದು, ಸಮ-ಬೆಸ ಸಾರಿಗೆ ಯೋಜನೆ ಜಾರಿ ಕುರಿತಂತೆ ಸಂಪೂರ್ಣ ಮಾಹಿತಿಗಳನ್ನು ನೀಡಲಿದ್ದಾರೆ ಎಂದು ಆಪ್ ನಾಯಕರು ತಿಳಿಸಿದ್ದಾರೆ.
ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾರಿಗೆ ಸಂಚಾರ ವ್ಯವಸ್ಥೆಯ ಮೂಲಸೌಕರ್ಯಗಳಿಲ್ಲವಾದ್ದರಿಂದ ದ್ವಿಚಕ್ರ ವಾಹನ ಸವಾರರಿಗೆ ವಿನಾಯಿತಿ ನೀಡುವ ಸಾಧ್ಯತೆಗಳಿವೆ ಎಂದು ಆಮ್ ಆದ್ಮಿ ಪಕ್ಷದ ವಕ್ತಾರರು ತಿಳಿಸಿದ್ದಾರೆ.