ಪ್ರಧಾನಿ ಮೋದಿ 500 ಮತ್ತು 1,000 ರೂಪಾಯಿ ನೋಟುಗಳನ್ನು ಏಕಾಏಕಿ ರದ್ದುಗೊಳಿಸಿದ್ದಾಗಿನಿಂದ ದೇಶದ ಎಲ್ಲ ಎಟಿಎಂ ಮತ್ತು ಬ್ಯಾಂಕ್ಗಳ ಮುಂದೆ ಜನರ ಉದ್ದುದ್ದ ಸಾಲು ಕಂಡುಬರುತ್ತಿದೆ. 30 ಡಿಸೆಂಬರ್ವರೆಗೆ ಎಲ್ಲ ಎಟಿಎಂಗಳಲ್ಲಿ ಹಣದ ಉಚಿತ ವಿತ್ ಡ್ರಾಗೆ ಅವಕಾಶ ನೀಡಬೇಕೆಂದು ಆರ್ಬಿಐ ಎಲ್ಲ ಬ್ಯಾಂಕ್ಗಳಿಗೆ ನಿರ್ದೇಶನ ನೀಡಿದೆ. ಆದರೂ ಹಣದ ಲಭ್ಯತೆಯಲ್ಲಿ ಕೊರತೆ ಮುಂದುವರೆದಿದೆ.
ನಗದಿನ ಕೊರತೆಯಿಂದ ಕಂಗಾಲಾಗಿರುವ ಪೂರ್ವ ದೆಹಲಿಯ ಜಗತ್ಪುರಿ ನಿವಾಸಿಗಳು ಹಣಕ್ಕಾಗಿ ಎಟಿಎಂ ಮುಂದೆ ನಿಂತು ನಿಂತು, ಎಟಿಎಂಗಳ ಮುಂದೆ ಹಣವಿಲ್ಲ ಎಂಬ ಬೋರ್ಡ್ ನೋಡಿ ರೋಸಿ ಹೋಗಿ ಏನು ಮಾಡಿದ್ದಾರೆ ಗೊತ್ತೇ? ಹಣ ನೀಡೆಂದು ಎಟಿಎಂ ಯಂತ್ರಕ್ಕೆ ಆರತಿ ಬೆಳಗಿ ಪೂಜೆ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಗತ್ಪುರಿ ನಿವಾಸಿ ಭೋಲಾ ಎನ್ನುವವರು, ಸರ್ಕಾರ ದೊಡ್ಡ ಮುಖಬೆಲೆ ನೋಟುಗಳನ್ನು ರದ್ದು ಮಾಡಿದಾಗಿನಿಂದ ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸಲು ನಾವು ಈ ರೀತಿಯಲ್ಲಿ ನಡೆದುಕೊಂಡಿದ್ದೇವೆ ಎನ್ನುತ್ತಾರೆ.