ತಮ್ಮ ತವರು ರಾಜ್ಯದಲ್ಲಿ ಪಟೇಲ್ ಸಮುದಾಯ ಕೈಗೊಂಡಿರುವ ಮೀಸಲಾತಿ ಹೋರಾಟ ಪ್ರಧಾನಿ ನರೇಂದ್ರ ಮೋದಿಯವರ ನಿದ್ದೆಗೆಡಿಸಿದ್ದರೂ, ಗುಜರಾತ್ನಲ್ಲಿ ಆದಷ್ಟು ಬೇಗ ಶಾಂತಿ ಮರಳಲಿದೆ ಎಂದು ಅವರು ಭರವಸೆಯನ್ನು ವ್ಯಕ್ತ ಪಡಿಸಿದ್ದಾರೆ. ಜತೆಗೆ ಅಭಿವೃದ್ಧಿಯೊಂದೇ ಎಲ್ಲ ಸಮಸ್ಯೆಗೂ ಪರಿಹಾರ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕನಿಷ್ಠ 10 ಜನರ ಸಾವಿಗೆ ಕಾರಣವಾದ ಹಿಂಸಾಚಾರ ಇಡೀ ದೇಶಕ್ಕೆ ನೋವನ್ನು ತಂದಿಟ್ಟಿದೆ ಎಂದು ಖೇದ ವ್ಯಕ್ತ ಪಡಿಸಿದ ಮೋದಿ, "ಗುಜರಾತಿನಲ್ಲಿ ಇತ್ತೀಚಿಗೆ ನಡೆಯುತ್ತಿರುವ ಹಿಂಸಾಚಾರದ ಘಟನೆಗಳು ಸಂಪೂರ್ಣ ದೇಶಕ್ಕೆ ನೋವು ತಂದಿಟ್ಟಿದೆ. ಮಹಾತ್ಮಾ ಗಾಂಧಿ ಮತ್ತು ಸರ್ದಾರ್ ಪಟೇಲ್ ನಾಡಿನಲ್ಲಿ ಇಂತಹದ್ದು ಏನು ನಡೆದರೂ ಇಡೀ ದೇಶ ಆಘಾತಕ್ಕೆ ಒಳಗಾಗುತ್ತದೆ ಮತ್ತು ನೋವನ್ನು ಅನುಭವಿಸುತ್ತದೆ", ಎಂದು ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ನಲ್ಲಿ ಹೇಳಿದ್ದಾರೆ.
'ಶಾಂತಿ, ಒಗ್ಗಟ್ಟು ಮತ್ತು ಸಹೋದರತೆ ಮಾತ್ರ ಸರಿಯಾದ ಹಾದಿಗಳು. ವಿಕಾಸದ ಪಥದಲ್ಲಿ ನಾವೆಲ್ಲರೂ ಜತೆಯಾಗಿ ನಡೆಯಬೇಕು. ಇದೊಂದೇ ನಮ್ಮೆಲ್ಲರ ಸಮಸ್ಯೆಗಳಿಗೆ ಪರಿಹಾರ', ಎಂದು ಅವರು ಹೇಳಿದ್ದಾರೆ.