ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ 'ಹಿಟ್ಲರ್'ಗೆ ಹೋಲಿಸಿರುವ ಕಾಂಗ್ರೆಸ್ ವರಿಷ್ಠ ದಿಗ್ವಿಜಯ್ ಸಿಂಗ್, ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಇಡೀ ದೇಶದ ಕೆಂಗಣ್ಣಿಗೆ ಗುರಿಯಾಗಿರುವ ಕಾಶ್ಮೀರ ಪ್ರತ್ಯೇಕತಾವಾದಿ ಮಸರತ್ ಆಲಂನನ್ನು ‘ಸಾಹೇಬ್’ ಎಂದು ಗೌರವದಿಂದ ಸಂಬೋಧಿಸುವುದರ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
ಮೋದಿಯನ್ನು ಒಬಾಮಾ ಹೊಗಳಿರುವ ಕುರಿತು ಪ್ರತಿಕ್ರಿಯೆ ನೀಡಿರುವ ದಿಗ್ವಿಜಯ್ಸಿಂಗ್,"ಈ ಹಿಂದೆ ಬ್ರಿಟನ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಕೂಡಾ, ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ನನ್ನು ಪ್ರಶಂಸಿಸಿದ್ದರು" ಎಂದು ಕಿಚಾಯಿಸಿದ್ದಾರೆ.
"ಪ್ರತ್ಯೇಕತಾವಾದಿ ಆಲಂ ಸಾಹೇಬ್ರನ್ನು ಯಾವ ಕಾನೂನಿನ ಯಾವ ಸೆಕ್ಷನ್ ಪ್ರಕಾರ ಜಮ್ಮು- ಕಾಶ್ಮೀರ ಸರಕಾರ ಬಂಧಿಸಿದೆ ಎಂಬುದನ್ನು ಸರಕಾರವೇ ನಮಗೆ ತಿಳಿಸಬೇಕು ಎಂದು ಒತ್ತಾಯಿಸಿರುವ ದಿಗ್ವಿಜಯ್ ಸಿಂಗ್, ಆಲಂ ಭಾರತದ ವಿರುದ್ಧ ಯುದ್ಧಕ್ಕೆ ಸಮನಾದ ಕೃತ್ಯವನ್ನು ಎಸಗಿದ್ದಾನೆ. ಹಾಗಾಗಿ ಆತನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ಹೇರಬೇಕಾಗುತ್ತದೆ", ಎಂದು ಹೇಳಿದ್ದಾರೆ.