ಬಿಹಾರ್ ವಿಧಾನ ಸಭಾ ಚುನಾವಣೆಯ ಕಾವು ಏರುತ್ತಲೇ ಇದ್ದು, ಕಿತ್ತಾಟ, ಕೆಸರೆರೆಚಾಟ, ವಾಗ್ವಾದಗಳು ಹೆಚ್ಚುತ್ತಲೇ ಇವೆ. ಈ ಮಧ್ಯೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಅಪ್ಲೋಡ್ ಮಾಡಿರುವ ವೀಡಿಯೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿ ಓಡಾಡುತ್ತಿದ್ದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪೇಚಿಗೆ ಸಿಲುಕಿಸಿದೆ. ಲಾಲು ಭೂತ ಬಿಡಿಸಲು ನಿತೀಶ್ ತಾಂತ್ರಿಕನನ್ನು ಭೇಟಿಯಾಗಿದ್ದರು ಎಂದು ಗಿರಿರಾಜ್ ಸಿಂಗ್ ವ್ಯಂಗ್ಯವಾಡಿದ್ದಾರೆ.
ವಿಡಿಯೋ ತುಣುಕಿನಲ್ಲಿ ನಿತೀಶ್ ಕುಮಾರ್ ಅವರು ಓರ್ವ ಮಂತ್ರವಾದಿಯ ಜತೆ ಕಂಡು ಬಂದಿದ್ದಾರೆ. ಅದರಲ್ಲಿ ಆತ ನಿತೀಶ್ ಅವರನ್ನು ತಬ್ಬಿಕೊಂಡಿ, ಮುತ್ತು ಕೊಟ್ಟಿದ್ದಾನೆ. ಜತೆಗೆ ' ನಿತೀಶ್ ಜಿಂದಾಬಾದ್, 'ಲಾಲು ಮುರ್ದಾಬಾದ್ ' ಎಂದು ಘೋಷಣೆ ಕೂಗಿದ್ದಾನೆ. ಅದನ್ನು ಕೇಳಿಸಿಕೊಂಡು ನಿತೀಶ್ ನಗುತ್ತಿದ್ದಾರೆ. ಯೂಟ್ಯೂಬ್ನಲ್ಲಿ ಬಿಜೆಪಿಯ ವಿವಾದಾತ್ಮಕ ನಾಯಕ ಗಿರಿರಾಜ್ ಸಿಂಗ್ ಅವರು ಇದನ್ನು ಅಪ್ಲೋಡ್ ಮಾಡಿದ್ದಾರೆ. ಇದು ಯಾವಾಗ ಚಿತ್ರೀಕರಿಸಿದ ವೀಡಿಯೋ ಎಂಬುದು ತಿಳಿದು ಬಂದಿಲ್ಲ. ಆದರೆ ಸಿಂಗ್ ಹೇಳುವ ಪ್ರಕಾರ ಲಾಲುವನ್ನು ಹಿಡಿದುಕೊಂಡಿರುವ ಭೂತವನ್ನು ನಾಶ ಪಡಿಸಲು ನಿತೀಶ್ ತಾಂತ್ರಿಕನನ್ನು ಭೇಟಿಯಾಗಿದ್ದರು.
ಈ ವೀಡಿಯೋವನ್ನು ಮುಂದಿಟ್ಟುಕೊಂಡು ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಸಿಂಗ್, 'ನಿತೀಶ್ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ. ಅವರು ಜನರಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಗೆಲುವಿಗಾಗಿ ಅವರು ಬ್ಲಾಕ್ ಮ್ಯಾಜಿಕ್ ಮೊರೆ ಹೋಗಿದ್ದಾರೆ', ಎಂದು ಆರೋಪಿಸಿದ್ದಾರೆ.
ಹಿಂದೊಮ್ಮೆ ಬದ್ಧ ರಾಜಕೀಯ ಶತ್ರುಗಳಾಗಿದ್ದ ಲಾಲು ಮತ್ತು ನಿತೀಶ್ ಈಗ ಜತೆಯಾಗಿ ಚುನಾವಣೆಯನ್ನೆದುರಸುತ್ತಿದ್ದಾರೆ. ಹೀಗಿರುವಾಗ ನಿತೀಶ್ ತಾಂತ್ರಿಕನನ್ನು ಭೇಟಿಯಾಗಿರುವುದು, ಆ ಸಂದರ್ಭದಲ್ಲಿ ತಾಂತ್ರಿಕ "ಲಾಲು ಮುರ್ದಾಬಾದ್' ಎಂದು ಹೇಳಿರುವುದು! ಇದರ ಹಿಂದಿನ ಮರ್ಮವೇನು ಎಂಬುದು ಕುತೂಹಲಕ್ಕೆ ಎಡೆ ಮಾಡಿದೆ.