ಸಮಾಜ ಒಡೆಯುವ ಬಿಜೆಪಿಗೆ ಆಸ್ಸಾಂ ಚುನಾವಣೆಯಲ್ಲಿ ಬಿಹಾರ್‌ ಗತಿಯೇ ಆಗಲಿದೆ: ರಾಹುಲ್ ಗಾಂಧಿ

ಮಂಗಳವಾರ, 16 ಫೆಬ್ರವರಿ 2016 (15:12 IST)
ದೇಶದಲ್ಲಿನ ಸಮುದಾಯಗಳನ್ನು ವಿಭಜಿಸುವ ಕೃತ್ಯದಲ್ಲಿ ತೊಡಗಿರುವ ಬಿಜೆಪಿಗೆ ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಆದ ಗತಿಯೇ ಪುನರಾವರ್ತನೆಯಾಗಲಿದೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. 
 
ಸೋನಿತ್ ಪುರ್‌ ಜಿಲ್ಲೆಯ ಗೋಹಾಪುರ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಂತಿಪ್ರಿಯರಾದ ಆಸ್ಸಾಂ ಜನತೆಗೆ ಬಿಜೆಪಿ ಯಾವ ರೀತಿ ಸಮುದಾಯಗಳನ್ನು ಒಡೆದು ಆಳಲು ಬಯಸುತ್ತದೆ ಎನ್ನುವ ಬಗ್ಗೆ ಮಾಹಿತಿಯಿದೆ ಎಂದು ಲೇವಡಿ ಮಾಡಿದರು.
 
ದೇಶದಲ್ಲಿ ಅಸಹಿಷ್ಣುತೆ ಮತ್ತು ಸಮುದಾಯಗಳಲ್ಲಿ ಒಡಕು ಉಂಟು ಮಾಡುತ್ತಿರುವ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಆಸ್ಸಾಂ ಜನತೆಗೆ ಕಾಂಗ್ರೆಸ್ ಪಕ್ಷ ಉತ್ತಮ ಆಯ್ಕೆಯಾಗಿದೆ ಎಂದು ಮತದಾರರಿಗೆ ಮನವಿ ಮಾಡಿದರು.  
 
ಪ್ರಸಕ್ತ ವರ್ಷದಲ್ಲಿಯೇ ಆಸ್ಸಾಂ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ಎರಡು ದಿನಗಳ ಆಸ್ಸಾಂ ಪ್ರವಾಸ ಹಮ್ಮಿಕೊಂಡು ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 
 
ವಲಸೆ ಮುಸ್ಲಿಮರ ಪ್ರಭಾವ ಹೆಚ್ಚಳವಾಗಿರುವ ಬಾರ್‌ಪೇಟಾ ಜಿಲ್ಲೆಯಲ್ಲಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್, ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಎಐಯುಡಿಎಫ್‌ ಪಕ್ಷ 2011ರಲ್ಲಿ ನಡೆದ ಚುನಾವಣೆಯಲ್ಲಿ ಎಂಟರಲ್ಲಿ ಐದು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ವೆಬ್ದುನಿಯಾವನ್ನು ಓದಿ