ಅಡುಗೆ ಮಾಡಲು ನಿರಾಕರಿಸಿದ್ದಕ್ಕೆ ಮೂತ್ರ ಕುಡಿ ಎಂದ ಪತಿ ಮಹಾಶಯ

ಸೋಮವಾರ, 29 ಸೆಪ್ಟಂಬರ್ 2014 (13:44 IST)
ಕ್ಷುಲ್ಲಕ ಕಾರಣಕ್ಕೆ ಹೆಂಡತಿಯ ಮೇಲೆ ಕೋಪಗೊಂಡ ಪತಿ ಮಹಾಶಯನೊಬ್ಬ ತನ್ನ ಇಬ್ಬರು ಮಕ್ಕಳ ಮುಂದೆ ಹೆಂಡತಿಗೆ ಮೂತ್ರವನ್ನು ಕುಡಿ ಎಂದು ಒತ್ತಾಯ ಮಾಡಿದ ಹೀನ ಘಟನೆಯೊಂದು ಮಧ್ಯಪ್ರದೇಶದಲ್ಲಿ ವರದಿಯಾಗಿದೆ. 

ಖಂಡಾವಾದ ಶಿಬ್ರುರ್ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ವೃತ್ತಿಯಲ್ಲಿ ರೈತನಾಗಿರುವ 38 ವರ್ಷದ ಆರೋಪಿ ಗೋಕುಲ್ ಬಲಾಯಿಯನ್ನು ಕಿಲ್ಲೋಡ್ ಠಾಣೆಯ ಪೋಲಿಸರು ಬಂಧಿಸಿದ್ದಾರೆ.
 
ಪ್ರತಿ ದಿನದಂತೆ ಘಟನೆ ನಡೆದ ರಾತ್ರಿ ಕೂಡ ಕುಡಿದು ಮನೆಗೆ ಮರಳಿದ  ಗೋಕುಲ್ ತನ್ನ ಪತ್ನಿಯ ಬಳಿ ಅಡುಗೆ ಮಾಡಿ ಊಟ ಬಡಿಸುವಂತೆ ಹೇಳಿದ್ದಾನೆ. ಮಧ್ಯರಾತ್ರಿಯಾಗಿದ್ದರಿಂದ ಆತನ ಪತ್ನಿ ಅಡುಗೆ ಮಾಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಆಕೆಯನ್ನು ಮನಬಂದಂತೆ ಥಳಿಸಿದ್ದಾನೆ ಮತ್ತು ಖಾಲಿ ಸರಾಯಿ ಬಾಟಲಿಯಲ್ಲಿ ಮೂತ್ರವನ್ನು ತುಂಬಿ 14 ವರ್ಷದ ಮಗ ಮತ್ತು 12 ವರ್ಷದ ಮಗಳ ಸಮ್ಮುಖದಲ್ಲಿ ಅದನ್ನು ಕುಡಿಯುವಂತೆ ಬಲವಂತ ಹೇರಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. 
 
 ಮರುದಿನ ಬೆಳಿಗ್ಗೆ ಹರ್ದಾ ಜಿಲ್ಲೆಯ ಚಿಪಾಬಾಡ್‌ನ ವಾಸಿಯಾಗಿರುವ ತನ್ನ ಸಹೋದರ ರಾಮ್ ದಾಸ್‌ನನ್ನು ಭೇಟಿಯಾದ ಪೀಡಿತ ಮಹಿಳೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಅದೇ ದಿನ ತನ್ನ ಸಹೋದರನ ಜತೆ ಸೇರಿ ಕಿಲ್ಲೋಡ್ ಠಾಣೆಗೆ ಬಂದು ಆಕೆ ಪ್ರಕರಣ ದಾಖಲಿಸಿದ್ದಾಳೆ. 
 
ಬಂಧಿತ ಆರೋಪಿ ಗೋಕುಲ್‌ ಮೇಲೆ ಐಪಿಸಿ ವಿಭಾಗ 294, 323, 506, 498ಎ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಕಿಲ್ಲೋಡ್ ಪೋಲಿಸ್ ಠಾಣಾಧಿಕಾರಿ  ಜೈಸಿಂಗ್ ಸುಲಿಯಾ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ