ದೆಹಲಿಯಲ್ಲಿ ಅಗ್ನಿ ದುರಂತ: ಒಂದೇ ಕುಟುಂಬದ ನಾಲ್ವರ ಸಾವು

ಮಂಗಳವಾರ, 9 ಫೆಬ್ರವರಿ 2016 (14:52 IST)
ಪೂರ್ವ ನವದೆಹಲಿಯ ದಿಲ್ ಶಾದ್ ಗಾರ್ಡನ್ ಪ್ರದೇಶದಲ್ಲಿ ಇಂದು ನಸುಕಿನ ಜಾವ ನಡೆದ ಅಗ್ನಿ ದುರಂತದಲ್ಲಿ 8 ವರ್ಷದ ಮಗು ಸೇರಿ ಒಂದೇ ಕುಟುಂಬದ ನಾಲ್ವರು ದರ್ಮರಣವನ್ನಪ್ಪಿದ್ದಾರೆ.
 
ಅವಘಡದಲ್ಲಿ ಮೃತರಾದವರನ್ನು ಪ್ರದೀಪ್ ಜೈಸ್ವಾಲ್ (59), ಪುತ್ರ ರಾಜನ್ (34), ಸೊಸೆ ಅನುಜಾ (33) ಮತ್ತು ಮೊಮ್ಮಗ ಅಂಶುಲ್ (8) ಎಂದು ಗುರುತಿಸಲಾಗಿದೆ.
ಮೃತ ಕುಟುಂಬ ಡಿಡಿಎ ಕಾಲೋನಿಯ ದಿಲ್ ಶಾದ್ ಗಾರ್ಡನ್‌ನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ  ಡ್ರೈ ಕ್ಲೀನಿಂಗ್ ಅಂಗಡಿಯನ್ನು ನಡೆಸುತ್ತಿದ್ದರು. 
 
ಇಂದು ಮುಂಜಾನೆ 5.45 ರ ಸುಮಾರಿಗೆ ಅಗ್ನಿಶಾಮಕ ದಳದವರಿಗೆ ಈ ಅನಾಹುತದ ಮಾಹಿತಿ ಲಭಿಸಿತು.
 
ಸ್ಥಳಕ್ಕಾಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ತೀರ್ವವಾಗಿ ಗಾಯಗೊಂಡಿದ್ದ ಜೈಶ್ವಾಲ್ ಕುಟುಂಬದವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಪ್ರದೀಪ್ ಜೈಸ್ವಾಲ್ ಅವರ ಪತ್ನಿ ಸರೋಜ್(30) ಸ್ಥಿತಿ ಕೂಡ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.  

ವೆಬ್ದುನಿಯಾವನ್ನು ಓದಿ