ಹಲವು ದಿನಗಳಿಂದ ಕಣ್ಮರೆಯಾಗಿದ್ದ ರಾಹುಲ್ ಗಾಂಧಿ ದಿಢೀರ್ ಪ್ರತ್ಯಕ್ಷರಾಗಿ ಕೇಂದ್ರ ಸರ್ಕಾರದ ಭೂಸ್ವಾಧೀನ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಬಹಿರಂಗ ರಾಲಿಯಲ್ಲಿ ಇಂದು ಭಾಗವಹಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ಕಾಂಗ್ರೆಸ್ ಗಣ್ಯರು ರಾಲಿಯಲ್ಲಿ ಭಾಗವಹಿಸಿದ್ದರು. ಮನಮೋಹನ್ ಸಿಂಗ್ ರಾಲಿಯಲ್ಲಿ ಮಾತನಾಡಿ ಭೂಸ್ವಾಧೀನ ಕಾಯ್ದೆಯ ವಿರುದ್ಧ ರೈತರಲ್ಲಿ ಜಾಗೃತಿ ಮೂಡಿಸಿದರು.
ನಂತರ ಮಾತನಾಡಿದ ರಾಹುಲ್ ಗಾಂಧಿ ಭಾರತ ಸರ್ಕಾರ ರೈತರನ್ನು ಮರೆತಿದೆ ಎಂಬ ಭಾವನೆ ಇದೆ. ನಮ್ಮ ದೇಶದ ರೈತರು ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ದೇಶದ ಉದ್ಯಮಗಳ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ. ರೈತರ ರಕ್ತದಿಂದ ನಮ್ಮ ದೇಶವನ್ನು ಕಟ್ಟಲಾಗಿದೆ. ಆದರೆ ಅವರ ಜಮೀನನ್ನು ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ರಾಹುಲ್ ಹೇಳಿದರು. ರಾತ್ರಿ ಮಲಗಿ ಬೆಳಗಾಗುವುದರಲ್ಲಿ ಏನಾಗುತ್ತೋ ಗೊತ್ತಿಲ್ಲ, ಎಲ್ಲಿ ಯಾರು ಜಮೀನು ಕಸಿದುಕೊಳ್ಳುತ್ತಾರೋ ಗೊತ್ತಿಲ್ಲ. ಅಂತಹ ಭಯ, ದುಗುಡ ರೈತರನ್ನು ಆವರಿಸಿದೆ ಎಂದು ರಾಹುಲ್ ಹೇಳಿದರು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಸಮಾವೇಶದಲ್ಲಿ ಉಪಸ್ಥಿತರಿದ್ದರು.