ಆತ್ಮಹತ್ಯೆ ಎನ್ನುವುದು ರೈತರಲ್ಲಿ ಫ್ಯಾಷನ್ ಆಗಿಬಿಟ್ಟಿದೆ: ಬಿಜೆಪಿ ಸಂಸದ

ಗುರುವಾರ, 18 ಫೆಬ್ರವರಿ 2016 (12:42 IST)
ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಫ್ಯಾಷನ್ ಬೆಳೆಸಿಕೊಂಡಿದ್ದಾರೆ ಮತ್ತು ಆ ಮೂಲಕ ಬದುಕನ್ನು ಅಂತ್ಯಗೊಳಿಸುವ ಟ್ರೆಂಡ್ ಅವರಲ್ಲಿ ಹುಟ್ಟಿಕೊಂಡಿದೆ ಎನ್ನುವ ಮೂಲಕ ಬಿಜೆಪಿ ಸಂಸದ ಗೋಪಾಲ ಶೆಟ್ಟಿ ಬಹುದೊಡ್ಡ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. 

ಬೊರಿವಿಲಿಯಲ್ಲಿ ಮಂಗಳವಾರ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಸಚಿವರು, 'ಎಲ್ಲ ರೈತರು ನಿರುದ್ಯೋಗ ಅಥವಾ ಹಸಿವಿನಿಂದಾಗಿ ಆತ್ಮಹತ್ಯೆ ನಿರ್ಧಾರವನ್ನು ಕೈಗೊಳ್ಳುವುದಿಲ್ಲ. ರೈತ ಸಮೂಹದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಫ್ಯಾಷನ್ ನಡೆಯುತ್ತಿದೆ. ಅದೊಂದು ಟ್ರೆಂಡ್ ಆಗಿಬಿಟ್ಟಿದೆ', ಎಂದು ಹೇಳಿದ್ದಾರೆ.
 
'ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಮಹಾರಾಷ್ಟ್ರ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ನೀಡಿದರೆ, ನೆರೆ ರಾಜ್ಯಗಳು 7 ಲಕ್ಷ ನೀಡುತ್ತಿವೆ. ಪರಿಹಾರ ನೀಡುವುದರಲ್ಲಿ ಸಹ ಸ್ಪರ್ಧೆ ಏರ್ಪಟ್ಟಿದೆ', ಎಂದು ಪ್ರಥಮ ಬಾರಿ ಆಯ್ಕೆಯಾಗಿರುವ ಶಾಸಕ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 
 
ಶೆಟ್ಟಿಯವರ ಈ ಮಾತನ್ನು ಖಂಡಿಸಿರುವ ಕಾಂಗ್ರೆಸ್, ಶಾಸಕರ ಈ ಹೇಳಿಕೆ ಬಿಜೆಪಿ ರೈತರ ಬಗ್ಗೆ ಹೊಂದಿರುವ ಅಸಂವೇದನಾಶೀಲತೆಯನ್ನು ತೋರುತ್ತದೆ ಎಂದು ಹೇಳಿದೆ. 
 
ಮಹಾರಾಷ್ಟ್ರದಲ್ಲಿ ರೈತರ ಸರಣಿ ಆತ್ಮಹತ್ಯೆ ಹೆಚ್ಚುತ್ತಲೇ ಹೋಗುತ್ತಿದ್ದು ಕಳೆದ ಜನವರಿ ತಿಂಗಳಿಂದ ಇಲ್ಲಿಯವರೆಗೆ 124 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ