ಮೋದಿ ದತ್ತು ಪಡೆದ ಹಳ್ಳಿಯ ರೈತರಿಗೆನೇ ಇನ್ನೂ ಸಿಕ್ಕಿಲ್ಲ ಪರಿಹಾರ

ಶುಕ್ರವಾರ, 24 ಏಪ್ರಿಲ್ 2015 (14:01 IST)
ಅಕಾಲಿಕ ಮಳೆಯ ಕಾರಣಕ್ಕೆ ಬೆಳೆನಾಶಗೊಂಡು ಚಿಂತಿತರಾಗಿರುವ ಉತ್ತರ ಭಾರತದ ರೈತರು ಪರಿಹಾರ ಧನಕ್ಕಾಗಿ ಸರಕಾರದ ಸಹಾಯವನ್ನು ಎದುರು ನೋಡುತ್ತಿದ್ದಾರೆ. ಆದರೆ, ಪ್ರಧಾನಮಂತ್ರಿ ಮೋದಿಯೇ ದತ್ತು ಪಡೆದ ವಾರಣಾಸಿಯ ಹಳ್ಳಿಯೊಂದರ ಜನರು ತಮಗೂ ಸಹ ಪರಿಹಾರಕ್ಕಾಗಿ ಕಾಯುವ ದುಃಸ್ಥಿತಿ ಬರಲಾರದು ಎಂದು ಭಾವಿಸಿದ್ದರು. ಆದರೆ ಅವರ ನಂಬಿಕೆ ಈಗ ಸುಳ್ಳಾಗಿದೆ. 

ತಾವು ವಿಶೇಷ ಮಾನ್ಯತೆ ಪಡೆದಿದ್ದರು ಕೂಡ ನಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಆದರ್ಶ ಗ್ರಾಮ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿಯವರು ದತ್ತು ಪಡೆದಿರುವ ವಾರಣಾಸಿಯ ಜಯಪುರ ಎಂಬ ಗ್ರಾಮದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೋಧಿ,ಸಾಸಿವೆ, ಆಲೂಗಡ್ಡೆ ಮತ್ತು ಋತುವಾರು ತರಕಾರಿಗಳನ್ನು ಬೆಳೆಯುವ ರೈತರು ಈ ಬಾರಿ ಅಕಾಲಿಕ ಮಳೆಯಿಂದಾಗಿ 70 ರಿಂದ 80 ಪ್ರತಿಶತ ಬೆಳೆನಾಶವನ್ನು ಅನುಭವಿಸುತ್ತಿದ್ದಾರೆ. ಆದರೆ ಅವರಿಗೆ ಸಹಾಯ ಮಾಡಲು ಯಾರು ಕೂಡ ಮುಂದೆ ಬರುತ್ತಿಲ್ಲವೆಂಬುದು ಅವರಿಗೆ ನುಂಗಲಾರದ ತುತ್ತಾಗಿದೆ. 
 
ಜಯಪುರದ ರೈತರ ಸಂಕಟವೇನೆಂದರೆ ಅವರಿಗೆ ಕೇಂದ್ರದ ಅನುದಾನ ಘೋಷಣೆಯಾಗಿದೆ. ಆದರೆ ಅದು ಇಲ್ಲಿಯವರೆಗೂ ಅವರನ್ನು ತಲುಪಿಲ್ಲ. ಅದು ಪ್ರಧಾನಿ ದತ್ತು ಗ್ರಾಮ ಎಂಬ ಕಾರಣಕ್ಕೆ ರಾಜ್ಯ ಸರ್ಕಾರವೂ ಸಹ ಅವರ ಕಡೆ ಗಮನ ಹರಿಸುತ್ತಿಲ್ಲ. ಗ್ರಾಮದಲ್ಲಿನ ಬಿಜೆಪಿ ಬೆಂಬಲಿಗರು, ನಾಯಕರು ಸೇರಿದಂತೆ ಗ್ರಾಮಸ್ಥರು ತಮ್ಮ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಲು ದತ್ತು ಪಡೆದುಕೊಂಡಿರುವುದು ಅರ್ಥಹೀನ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ