ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಅಧಿಕಾರಕ್ಕೇರಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರಕಾರದ ವಿರುದ್ಧ ಚಾಟಿ ಬೀಸಿರುವ ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ 'ಕೇಂದ್ರ ಸರಕಾರದ ಒಂದು ವರ್ಷದ ಸಾಧನೆ ಶೂನ್ಯ ಎಂದಿದ್ದಾರಲ್ಲದೇ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ', ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
"ನಮ್ಮ ಯೋಜನೆಗಳಿಗೆ ಮರುನಾಮಕರಣ ಮಾಡಿ ಸರಕಾರ ಜಾರಿಯಲ್ಲಿ ತರುತ್ತಿದೆ. ಮೇಕ್ ಇನ್ ಇಂಡಿಯಾ ಸಹ ನಮ್ಮದೇ ಪರಿಕಲ್ಪನೆ. ನಮ್ಮ ಯೋಜನೆಯನ್ನೇ ಹೊಸದಾಗಿ ಜಾರಿ ಮಾಡುತ್ತಿದ್ದಾರೆ.ನಾವು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ದರ 8.5ರಷ್ಟಿತ್ತು. ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೇರಿದ ಮೇಲೆ ದೇಶದ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ. ಆರ್ಥಿಕತೆ ಸುಧಾರಿಸಲು ಸರಕಾರ ಯಾವುದೇ ಹೊಸ ನೀತಿಗಳನ್ನು ಜಾರಿಗೆ ತಂದಿಲ್ಲ", ಎಂದು ಸರ್ಕಾರದ ವಿರುದ್ಧ ಸಿಂಗ್ ಹರಿಹಾಯ್ದಿದ್ದಾರೆ.