ಲೋಕಸಭೆ ಸೋಲಿನ ಸೇಡು ತೀರಿಸಿಲು ಕಾಂಗ್ರೆಸ್‌ನಿಂದ ಸಂಸತ್ ಕಲಾಪಕ್ಕೆ ಅಡ್ಡಿ: ಪ್ರಧಾನಿ ಮೋದಿ

ಶುಕ್ರವಾರ, 5 ಫೆಬ್ರವರಿ 2016 (16:52 IST)
ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಧಿವೇಶನದ ಕಲಾಪಗಳನ್ನು ಅಸ್ತವ್ಯಸ್ಥಗೊಳಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
 
ಆಸ್ಸಾಂ ರಾಜ್ಯದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ಸಂಸತ್ತಿನಲ್ಲಿ ಒಂದು ಕುಟುಂಬ ಮಾತ್ರ ಋುಣಾತ್ಮಕ ರಾಜಕೀಯದಲ್ಲಿ ತೊಡಗಿದೆ. ಇತರ ವಿಪಕ್ಷಗಳ ನಾಯಕರು ತಮ್ಮನ್ನು ವಿರೋಧಿಸುತ್ತಿದ್ದರೂ ಸಂಸತ್ ಕಲಾಪ ನಡೆಯಲು ಬಯಸುತ್ತಾರೆ ಎಂದರು.
 
ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ 400 ರಿಂದ 40 ಕ್ಷೇತ್ರಗಳಿಗೆ ಇಳಿಕೆಯಾದ ಕಾಂಗ್ರೆಸ್ ಪಕ್ಷ ಮೋದಿ ಜನಪರ ಯೋಜನೆಗಳನ್ನು ಜಾರಿಗೆ ತರಬಾರದು ಎನ್ನುವ ಉದ್ದೇಶ ಹೊಂದಿದೆ. ಇದರಿಂದಾಗಿ ಕಲಾಪಕ್ಕೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದರು.
 
ಕಾಂಗ್ರೆಸ್ ಪಕ್ಷದ ವಿರುದ್ಧ ಮತಚಲಾಯಿಸಿ ಅಧಿಕಾರದಿಂದ ದೂರವಿರುವಂತೆ ಮಾಡಿದ ಬಡವರು ಮತ್ತು ಬಡ ಉದ್ಯೋಗಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ ಎಂದರು.
 
ಕಳೆದ ಎರಡು ಅಧಿವೇಶನಗಳಲ್ಲಿ ವಿಪಕ್ಷಗಳು ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡು ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹೇಳಿಕೆ ಹೊರಬಿದ್ದಿದೆ.
 
ಪ್ರಧಾನಿ ಮೋದಿ, ಬಿಜೆಪಿ ಮತ್ತು ಬಿಜೆಪಿ ಸರಕಾರವನ್ನು ವಿರೋಧಿಸುವ ಇತರ ರಾಜಕೀಯ ಪಕ್ಷಗಳ ಮುಖಂಡರು ಸಂಸತ್ ಕಲಾಪ ನಡೆಯಲು ಬಯಸುತ್ತಾರೆ. ಆದರೆ, ಗಾಂಧಿ ಕುಟುಂಬ ಕಲಾಪಕ್ಕೆ ಅಡ್ಡಿಯಾಗಿದೆ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ