ದೆಹಲಿಯ ಗ್ಯಾಂಗ್ರೇಪ್ ಸಂತ್ರಸ್ತೆ ನಿರ್ಭಯಾಳಿಗೆ ಚಿಕಿತ್ಸೆ ನೀಡಿದ ತಂಡದಲ್ಲಿದ್ದ ದೆಹಲಿ ಮೂಲದ ದಾದಿ ಮೇಲೆ ಮಾನ್ಸಾ ಜಿಲ್ಲೆಯ ಬುದ್ಲಾಡಾದಲ್ಲಿ ಗ್ಯಾಂಗ್ರೇಪ್ ಮಾಡಿದ ಪೈಶಾಚಿಕ ಘಟನೆ ನಡೆದಿದೆ. ನಾಲ್ವರು ವ್ಯಕ್ತಿಗಳ ವಿರುದ್ಧ ಕೇಸು ದಾಖಲಿಸಲಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು ಸ್ಥಳೀಯ ನಿವಾಸಿಗಳಾಗಿದ್ದು, ಲಕವೀಂದರ್ ಸಿಂಗ್ ಮತ್ತು ರಾಜವಿರ್ ಸಿಂಗ್ ಹೆಸರಿನವರು. ಆದರೆ ಅತ್ಯಾಚಾರಕ್ಕೊಳಗಾದ ಮಹಿಳೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದ್ದು, ಮ್ಯಾಜಿಸ್ಟ್ರೇಟ್ ಎದುರು ಅವರನ್ನು ಹಾಜರುಪಡಿಸಲಾಗುತ್ತದೆ.
ಪೊಲೀಸರಿಗೆ ಮಹಿಳೆ ಸಾಕ್ಷ್ಯ
ತಾನು ಲಕ್ವಿಂದರ್ ಪತ್ನಿ ರಮಣದೀಪ್ ಕೌರ್ ಮೂಲಕ ಲಕ್ವಿಂದರ್ಗೆ ಪರಿಚಿತಳಾಗಿದ್ದು, ಸೋಮವಾರ ಬುದಲಾಡಾ ರೈಲ್ವೆ ನಿಲ್ದಾಣಕ್ಕೆ ಬಂದಾಗ ಲಕ್ವಿಂದರ್ ತನ್ನನ್ನು ಹಸನ್ಪುರ ಗ್ರಾಮದ ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋದ. ಅಲ್ಲಿದ್ದ ಕೋಣೆಯಲ್ಲಿ ಆಗಲೇ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರಿದ್ದರು. ಅಲ್ಲಿ ತನ್ನ ಮೇಲೆ ಅಮಾನುಷವಾಗಿ ಗ್ಯಾಂಗ್ರೇಪ್ ಮಾಡಿ ರೈಲ್ವೆ ನಿಲ್ದಾಣಕ್ಕೆ ತಂದುಬಿಡಲಾಯಿತು ಎಂದು ದೂರಿದ್ದಾರೆ.
ತಾನು ಸಹಾಯಕ್ಕಾಗಿ ಕಿರುಚಿಕೊಂಡಾಗ ಆರೋಪಿ ತಲೆತಪ್ಪಿಸಿಕೊಂಡ ಎಂದು ಹೇಳಿದ್ದಾರೆ. ಲಕ್ವಿಂದರ್ ಮತ್ತು ಅವನ ಪತ್ನಿ ನಡುವೆ ದಾಂಪತ್ಯ ವಿರಸದ ಹಿನ್ನೆಲೆಯಲ್ಲಿ ರಮಣದೀಪ್ ನನ್ನ ಮನೆಯಲ್ಲಿ ತಂಗಿದ್ದರು. ಕೆಲವು ದಿನಗಳ ನಂತರ ಲಕ್ವೀಂದರ್ ಅವರನ್ನು ಪಂಜಾಬ್ಗೆ ಕರೆದುಕೊಂಡು ಹೋಗಿದ್ದ. ಒಂದು ದಿನ ಲಕ್ವೀಂದರ್ ಕರೆ ಮಾಡಿ ರಮಣದೀಪ್ ಗಂಭೀರ ಸ್ಥಿತಿಯಲ್ಲಿದ್ದು, ಅವಳನ್ನು ನೋಡುವಂತೆ ತಿಳಿಸಿದ್ದರಿಂದ ನಾನು ಪಂಜಾಬ್ನಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದೆ ಎಂದು ದಾದಿ ದೂರಿನಲ್ಲಿ ತಿಳಿಸಿದ್ದಾಳೆ.