ಪ್ರತ್ಯೇಕತಾವಾದಿಗಳನ್ನು ಪಾಕ್‌ಗೆ ಗಡಿಪಾರು ಮಾಡಬೇಕು: ಆರ್‌ಎಸ್ಎಸ್

ಶುಕ್ರವಾರ, 24 ಏಪ್ರಿಲ್ 2015 (17:14 IST)
ಪಾಕ್ ಪರ ಘೋಷಣೆಗಳನ್ನು ಕೂಗಿರುವ ಪ್ರತ್ಯೇಕತಾವಾದಿಗಳನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

"ಪಾಕ್ ಪರ ಘೋಷಣೆಗಳನ್ನು ಹೇಳುವವರನ್ನು, ಅದರಲ್ಲೂ ಬಹುಮುಖ್ಯವಾಗಿ ಪ್ರತ್ಯೇಕತಾವಾದಿಗಳು ಮತ್ತು ಅವರ ಪರಿವಾರವನ್ನು ಭಾರತದ ನೆಲದಲ್ಲಿ ಇರಲು ಸರಕಾರ ಅವಕಾಶ ಮಾಡಿಕೊಡಬಾರದು", ಎಂದು ಹಿರಿಯ ಆರ್‌ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್ ಹೇಳಿದ್ದಾರೆ. 
 
ಹೀಗೆ ಮಾಡುವುದರಿಂದ ಕಾಶ್ಮೀರದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಕಾಣಬಹುದು. ಆದ್ದರಿಂದ ಭಾರತ ಸರ್ಕಾರ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರನ್ನು ಪಾಕಿಸ್ತಾನಕ್ಕೆ  ಗಡಿಪಾರು ಮಾಡಬೇಕು," ಎಂದು ಅವರು ಆಗ್ರಹಿಸಿದ್ದಾರೆ.
 
"ದೇಶ ಎದುರಿಸುತ್ತಿರುವ ಸವಾಲುಗಳು ಮತ್ತು ಭಾರತದ ಮುಸ್ಲಿಮರ ಪಾತ್ರ" ಎಂಬ ವಿಷಯದಲ್ಲಿ ನಡೆದ ಸೆಮಿನಾರ್‌ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಸಹ ಪೋಷಕರು ಸಹ ಆಗಿರುವ ಕುಮಾರ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. 
 
"ಪ್ರತ್ಯೇಕತಾವಾದಿಗಳನ್ನು ದೇಶದಲ್ಲಿ ಇರಲು ಬಿಟ್ಟಿದ್ದು ಜನರ ಮತ್ತು ಸರಕಾರದ ದೊಡ್ಡಗುಣ. ಆದರೆ ಈಗ ನಾವು ಸಹಿಷ್ಣತೆ ಮಿತಿಯನ್ನು ಮೀರುವಂತೆ ಅವರು ವರ್ತಿಸುತ್ತಿದ್ದಾರೆ", ಎಂದು ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. 
 
ಅವಕಾಶವಾದಿ ಗುಂಪುಗಳಾದ ಹುರಿಯತ್ ಕಾನ್ಫರೆನ್ಸ್ ಮತ್ತು ಇತರ ರಾಜಕಾರಣಿಗಳ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡು ನರಳದಿರಿ ಎಂದು ಅವರು ಮುಸ್ಲಿಂ ಸಮುದಾಯದವರಿಗೆ ಎಚ್ಚರಿಕೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ