ಮಾಜಿ ರಾಷ್ಟ್ರಪತಿ, ಖ್ಯಾತ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರವನ್ನು ರಾಮೇಶ್ವರಂ ಬಳಿಯ ಅಂತ್ಯಕ್ರಿಯೆಗೆ ನಿಗಪಡಿಸಲಾಗಿದ್ದ ಸ್ಥಳ ಪೆಯಿಕರುಂಬುವಿಗೆ ತರಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಂತಿಮ ನಮನ ಸಲ್ಲಿಸಿದರು.
ರಕ್ಷಣಾ ಸಿಬ್ಬಂದಿಗಳೊಂದಿಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಅಂತಿಮ ನಮನ ಸಲ್ಲಿಸಿದರು. ಬಳಿಕ ತಮಿಳುನಾಡು ರಾಜ್ಯಪಾಲ ರೋಸಯ್ಯ, ಕೇಂದ್ರ ಸಚಿವರುಗಳಾದ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ತಮಿಳುನಾಡು ಹಣಕಾಸು ಸಚಿವ ಪನ್ನೀರ ಸೆಲ್ವಂ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು. ನೇಪಾಳ ಹಾಗೂ ಭೂತಾನ್ ನಿಂದಲೂ ಕೂಡ ಹಲವು ರಾಜಕೀಯ ಪ್ರತನಿಧಿಗಳು ಭಾಗವಹಿಸಿದ್ದಾರೆ. ಅಂತಿಮವಾಗಿ ಮುಸ್ಲಿಂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದ್ದು, 12.30ಕ್ಕೆ ನೆರವೇರುವ ಲಕ್ಷಣಗಳಿವೆ.