ಸಂಭ್ರಮಾಚರಣೆ ವೇಳೆ ಗುಂಡು ತಗುಲಿ ವರನ ದುರ್ಮರಣ

ಗುರುವಾರ, 18 ಫೆಬ್ರವರಿ 2016 (13:47 IST)
ತನ್ನದೇ ಮದುವೆಯ ಸಂಭ್ರಮಾಚರಣೆಯಲ್ಲಿ ಹಾರಿಸಿದ ಗುಂಡು ತಗುಲಿದ ಪರಿಣಾಮ ವರ ದಾರುಣವಾಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ. 
 
ಬುಧವಾರ ರಾತ್ರಿ ಈ ದುರ್ಘಟನೆ ನಡೆದಿದ್ದು ಮೃತನನ್ನು 28 ವರ್ಷದ ಅಮಿತ್ ರಸ್ತೋಗಿ ಎಂದು ಗುರುತಿಸಲಾಗಿದೆ. ಮದುವೆ ದಿಬ್ಬಣ ಪ್ರೇಮ ನಗರದಲ್ಲಿರುವ ಅತಿಥಿ ಗೃಹಕ್ಕೆ ಬಂದಾಗ ಸಂಭ್ರಮಾಚರಣೆಯಲ್ಲಿ ಕೆಲವು ಜನರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅದರಲ್ಲಿ ಒಂದು ಗುಂಡು ಅಮಿತ್ ತಲೆಯಲ್ಲಿ ತೂರಿ ಹೋಗಿದೆ. ಪ್ರಜ್ಞೆ ತಪ್ಪಿ ಬಿದ್ದ ಅಮಿತ್‌ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವನನ್ನು ಬದುಕಿಸಲಾಗಲಿಲ್ಲ. 
 
ಈ ತಿಂಗಳ ಆರಂಭದಲ್ಲಿ ಶಾಲ್ಮಿ ಮತ್ತು ಬಾಲ್ಘಾಟ್‌ನಲ್ಲಿ ಇಬ್ಬರು ಮಕ್ಕಳು ಇದೇ ರೀತಿಯಲ್ಲಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು. 
 
ಸಂಭ್ರಮದಲ್ಲಿದ್ದ ಮದುವೆ ಮಂಟಪವೀಗ ಮಸಣವಾಗಿ ಪರಿವರ್ತಿತವಾಗಿದ್ದು ಎರಡು ಪರಿವಾರದವರು ದುಃಖದ ಕಡಲಲ್ಲಿ ಮುಳುಗಿದ್ದಾರೆ. 

ವೆಬ್ದುನಿಯಾವನ್ನು ಓದಿ