ಹಾಡಹಗಲೇ ರಿವಾಲ್ವರ್‌ನಿಂದ ಬೆದರಿಸಿ ಲಾಲು ಯಾದವ್ ಅಳಿಯನ ಕಾರು ಕಳ್ಳತನ

ಬುಧವಾರ, 3 ಫೆಬ್ರವರಿ 2016 (21:38 IST)
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ ಅಳಿಯ ವಿನೀತ್ ಯಾದವ್‌ರನ್ನು ಇಬ್ಬರು ವ್ಯಕ್ತಿಗಳು ರಿವಾಲ್ವರ್‌ನಿಂದ ಬೆದರಿಸಿ ಸುವಿ ಕಾರು ಕಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ಸಿಕಿಂದರ್‌ಪುರ್ ಮೆಟ್ರೋ ರೈಲ್ವೆ ನಿಲ್ದಾಣದ ಬಳಿ ಇಂದು ಸಂಜೆ ನಡೆದಿದೆ.
  
ಲಾಲು ಪ್ರಸಾದ್ ಯಾದವ್‌ರ ಐದನೇ ಪುತ್ರಿಯಾದ ಹೇಮಾರನ್ನು ವಿವಾಹವಾದ ವಿನೀತ್ ಯಾದವ್, ಇಂದು ಸಂಜೆ ವೈಯಕ್ತಿಕ ಕೆಲಸದ ನಿಮಿತ್ಯ ಸಿಕಿಂದರ್‌ಪುರ್ ಮೆಟ್ರೋ ರೈಲ್ವೆ ನಿಲ್ದಾಣಕ್ಕೆ ಸುಮಾರು 2.30 ಗಂಟೆಗೆ ಆಗಮಿಸಿದ್ದರು. ಕಾರು ಚಾಲಕ ವಾಹನವನ್ನು ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದನು ಎನ್ನಲಾಗಿದೆ. 
 
ಸಂಜೆ 4 ಗಂಟೆ ಸುಮಾರಿಗೆ ಇಬ್ಬರು ವ್ಯಕ್ತಿಗಳು ಬಂದು ಒತ್ತಾಯಪೂರ್ವಕವಾಗಿ ಕಾರು ಚಾಲಕನನ್ನು ಹೊರಗೆಳೆದು ಥಳಿಸಿದ್ದಲ್ಲದೇ ರಿವಾಲ್ವರ್‌ನಿಂದ ಬೆದರಿಸಿ ಸುವಿ ಕಾರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
 
ಸ್ಥಳಕ್ಕೆ ಬಂದ ವಿನೀತ್ ಯಾದವ್, ಘಟನೆಯ ಬಗ್ಗೆ ಕಾರು ಚಾಲಕನಿಂದ ಮಾಹಿತಿ ಪಡೆದು ಪೊಲೀಸ್ ಠಾಣೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.  
 

ವೆಬ್ದುನಿಯಾವನ್ನು ಓದಿ