ಜಯಾ ವಕೀಲರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಬುಧವಾರ, 28 ಜನವರಿ 2015 (19:41 IST)
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ಜಯಲಲಿತಾ ಪರ ವಕೀಲರ ವಿರುದ್ಧ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತು.
 
ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಮೂರ್ತಿ ಕೆ.ಆರ್‌.ಕುಮಾರ್‌ ತಮ್ಮ ಪ್ರಶ್ನೆಗಳಿಗೆ ಜಯಲಲಿತಾ ಪರ ವಕೀಲರು ಸೂಕ್ತ ಉತ್ತರ ನೀಡದ್ದರಿಂದ ಅಸಮಾಧಾನ ಹೊರಹಾಕಿದರು.
 
ಈ ಹಿಂದಿನ ವಿಚಾರಣೆಯಲ್ಲಿ ಜಯಾ ಪರ ವಕೀಲ ಸುಪ್ರೀಂಕೋರ್ಟ್‌ನ ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ನಾಗೇಶ್ವರ ರಾವ್‌ ವಾದ ಮಂಡಿಸಿ ತಮಿಳುನಾಡಿನ ಡಿವಿಎಸಿ ಜಯಲಲಿತಾ ಅವರು 66 ಕೋಟಿ ರೂ. ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ತನಿಖಾ ವರದಿಯಲ್ಲಿ ತಿಳಿಸಿತ್ತು. ಆದರೆ ಡಿವಿಎಸಿ ತಿಳಿಸಿದ್ದ ಮೊತ್ತಕ್ಕಿಂತ 90 ಲಕ್ಷ ರೂ. ಹೆಚ್ಚುವರಿ ಹಣವನ್ನು ಜಯಲಲಿತಾ ಹೊಂದಿದ್ದರು. ಈ ಹಣವೆಲ್ಲಾ ಅಕ್ರಮ ಆಸ್ತಿಯಲ್ಲ, ಸಕ್ರಮ ಆಸ್ತಿಯಾಗಿದ್ದು ತೆರಿಗೆ ಪಾವತಿಸಲಾಗಿದೆ ಎಂದು ಹೈಕೋರ್ಟ್‌ಗೆ ತಿಳಿಸಿದ್ದರು.
 
ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಮಂಗಳವಾರ ಜಯಲಲಿತಾ ಪರ ವಕೀಲರನ್ನು ಪ್ರಶ್ನಿಸಿ 90 ಲಕ್ಷ ರೂ. ಹೆಚ್ಚುವರಿ ಹಣ ಇದೆ ಎನ್ನುತ್ತೀರಿ, ಅದಕ್ಕೆ ಸೂಕ್ತ ದಾಖಲೆ ಇಲ್ಲ. ಅದನ್ನು ಹೇಗೆ ನಂಬುವುದು ಎಂದು ವಕೀಲ ಬಿ.ಕುಮಾರ್‌ ಅವರನ್ನು ಪ್ರಶ್ನಿಸಿದರು. ನ್ಯಾಯಮೂರ್ತಿಗಳ ಪ್ರಶ್ನೆಗೆ ಸೂಕ್ತ ಉತ್ತರ ನೀಡುವಲ್ಲಿ ಜಯ ಪರ ವಕೀಲರು ತಡಕಾಡಿದರು. ಜತೆಗೆ ನಾಗೇಶ್ವರ ರಾವ್‌ ಅವರು ಈ ಹಿಂದೆ ಹೇಳಿದ್ದ ಹೇಳಿಕೆಯನ್ನೇ ಪುನರಾವರ್ತಿಸಿದರು. ಇದರಿಂದ ಬೇಸರಗೊಂಡ ನ್ಯಾಯಮೂರ್ತಿಗಳು, ಹೇಳಿದ್ದನ್ನೇ ಪದೇ ಪದೇ ಹೇಳುತ್ತಿದ್ದೀರಿ. ನನ್ನ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಹೆಚ್ಚುವರಿ 90 ಲಕ್ಷ ರೂ.ಗೆ ದಾಖಲೆ ನೀಡಬೇಕು ಎಂದು ತರಾಟೆಗೆ ತೆಗೆದುಕೊಂಡು ವಿಚಾರಣೆ ಮುಂದೂಡಿದರು.
 

ವೆಬ್ದುನಿಯಾವನ್ನು ಓದಿ