ರಾಜನಾಥ್ ಸಿಂಗ್ ಚಾವಣಿಯಿಂದ ನುಸುಳಿದ್ಯಾಕೆ?

ಗುರುವಾರ, 9 ಏಪ್ರಿಲ್ 2015 (15:40 IST)
ದಕ್ಷಿಣ ದೆಹಲಿಯ ವಸಂತ್ ಕುಂಜ್‌ನಲ್ಲಿ ಸರ್ಕಾರಿ ಕಟ್ಟಡವೊಂದರ ಲಿಫ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಿನಿಮೀಯ ಶೈಲಿಯಲ್ಲಿ ಛಾವಣಿಯನ್ನೇರಿ ಹೊರಬಂದಿದ್ದಾರೆ.
 
ಅರೆಸೈನಿಕ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್)ನ ಪ್ರಧಾನ ಕಚೇರಿಯಲ್ಲಿ "ಶೌರ್ಯ ದಿನವನ್ನು" ಆಚರಿಸಲು ತೆರಳಿದ್ದ ವೇಳೆ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ.
 
ಸಿಂಗ್, ಸಿಆರ್‌ಪಿಎಫ್ ಮಹಾನಿರ್ದೇಶಕ ಮತ್ತು ಗೃಹ ರಾಜ್ಯ ಸಚಿವ ಕಿರಣ್ ರಿಜ್ಜು ಜತೆಗೆ ಲಿಫ್ಟ್‌ವೊಂದರಲ್ಲಿ ಹೋಗುತ್ತಿದ್ದಾಗ ಅದು ಹಠಾತ್ ಆಗಿ ನಿಲುಗಡೆಗೊಂಡಿದೆ. ಇದರಿಂದ ಆತಂಕಕ್ಕೊಳಗಾದ ಅವರು ಆಲಾರಾಂ ಒತ್ತಿದ್ದಾರೆ. 
 
ಲಿಫ್ಟ್ ಅಲ್ಲಾಡದಿರುವಾಗ ಬೇರೆ ದಾರಿ ಕಾಣದೇ 63 ವರ್ಷದ ಗೃಹ ಸಚಿವ, ಸಿಆರ್‌ಪಿಎಫ್ ಉನ್ನತ ಅಧಿಕಾರಿ ಮತ್ತು ಕಿರಿಯ ಗೃಹ ಸಚಿವರು ಚಾವಣಿ ಮೇಲೇರಿ ಹೊರ ಬಂದಿದ್ದಾರೆ. 
 
ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಂಗ್ ಈ ಅನುಭವವನ್ನು ವೇದಿಕೆಯಲ್ಲಿ ಹೇಳಿಕೊಂಡರು. 

ವೆಬ್ದುನಿಯಾವನ್ನು ಓದಿ