ನಾನು ಯಾರೊಬ್ಬರ ಏಜೆಂಟ್ ಅಲ್ಲ: ಅರುಣಾಚಲ್ ಪ್ರದೇಶದ ರಾಜ್ಯಪಾಲ

ಮಂಗಳವಾರ, 2 ಫೆಬ್ರವರಿ 2016 (17:10 IST)
ಅರುಣಾಚಲ್ ಪ್ರದೇಶದ ರಾಜಭವನ ಬಿಜೆಪಿ, ಆರೆಸ್ಸೆಸ್ ಕೇಂದ್ರ ಕಚೇರಿಯಾಗಿದೆ ಎನ್ನುವ ಆರೋಪಗಳನ್ನು ತಳ್ಳಿಹಾಕಿದ ರಾಜ್ಯಪಾಲ ಜ್ಯೋತಿ ಪ್ರಸಾದ್ ರಾಜ್‌ಖೋವಾ, ನಾನು ಯಾರೊಬ್ಬರ ಏಜೆಂಟ್‌ ಅಲ್ಲ. ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ. 
 
ಕಾಂಗ್ರೆಸ್ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಾಜಕಾರಣಿಯಲ್ಲ ಮತ್ತು ರಾಜಭವನವನ್ನು ಯಾವುದೇ ರಾಜಕೀಯ ಪಕ್ಷಗಳಿಗಾಗಿ ಬಳಸಲು ಅನುಮತಿ ನೀಡಿಲ್ಲ. ಯಾವುದೇ ರಾಜಕೀಯ ಪಕ್ಷದ ವಿರುದ್ಧ ದ್ವೇಷದ ಭಾವನೆ ಹೊಂದಿಲ್ಲ. ಸಂವಿಧಾನದ ನಿಯಮದಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
 
ಅರುಣಾಚಲ್ ಪ್ರದೇಶದಲ್ಲಿ ಗಣರಾಜ್ಯೋತ್ಸವ ದಿನದಂದು ಹೇರಲಾದ ರಾಷ್ಟ್ರಪತಿ ಅಡಳಿತ ತಾತ್ಕಾಲಿಕವಾಗಿದೆ.. ರಾಜ್ಯದ ವಿಧಾನಸಭೆಯನ್ನು ವಿಸರ್ಜಿಸಿಲ್ಲ. ಆದರೆ ಅಮಾನತ್ತುಗೊಳಿಸಲಾಗಿದೆ. ಪರಿಸ್ಥಿತಿ ತಿಳಿಗೊಂಡ ನಂತರ ರಾಷ್ಟ್ರಪತಿ ಅಡಳಿತವನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದ್ದಾರೆ.
 
ಶೀಘ್ರವಾಗಲಿ ಅಥವಾ ವಿಳಂಬವಾಗಲಿ ಆದರೆ, ಪ್ರಜೆಗಳಿಂದ ಚುನಾಯಿತವಾದ ಪಕ್ಷದ ಸರಕಾರ ಅಧಿಕಾರದಲ್ಲಿರುತ್ತದೆ. ಅಲ್ಲಿಯವರೆಗೆ ಕಾನೂನು ಸುವ್ಯವಸ್ಥೆಯೊಂದಿಗೆ ಉತ್ತಮ ಅಡಳಿತ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸುವುದಕ್ಕೆ ಚಾಲನೆ ನೀಡಲಾಗುವುದು ಎಂದು ಅರುಣಾಚಲ್ ಪ್ರದೇಶದ ರಾಜ್ಯಪಾಲ ಜ್ಯೋತಿಪ್ರಸಾದ್ ರಾಜ್‌ಖೋವಾ ಹೇಳಿದ್ದಾರೆ.  

ವೆಬ್ದುನಿಯಾವನ್ನು ಓದಿ