ಮಾರ್ಚ್ ತಿಂಗಳಲ್ಲಿ ರಾಮ ಮಂದಿರ ಅಭಿಯಾನ ಪ್ರಾರಂಭಿಸಲಿರುವ ವಿಎಚ್‌ಪಿ

ಗುರುವಾರ, 29 ಜನವರಿ 2015 (18:42 IST)
ರಾಮ ಮಂದಿರ ನಿರ್ಮಾಣ ಚಳುವಳಿಗೆ ಬೆಂಬಲವನ್ನು ಪಡೆದುಕೊಳ್ಳುವ ದಿಶೆಯಲ್ಲಿ ವಿಶ್ವ ಹಿಂದೂ ಪರಿಷದ್ ಉತ್ತರ ಪ್ರದೇಶದ ಸಣ್ಣಪುಟ್ಟ ಪ್ರದೇಶಗಳಿಗೆ ಭೇಟಿ ನೀಡಲು ಮತ್ತು ಮಾರ್ಚ್‌ನಲ್ಲಿ ಆಚರಿಸಲ್ಪಡುವ ರಾಮನವಮಿ ಹಬ್ಬಕ್ಕೂ ಮುನ್ನವೇ ದೇಶಾದ್ಯಂತ ಶ್ರೀರಾಮ ಜನ್ಮೋತ್ಸವವನ್ನು ಆಚರಿಸಲು ತೀರ್ಮಾನಿಸಿದೆ. 
 
ಅಭಿಯಾನದಲ್ಲಿ ಭಾಗವಹಿಸುತ್ತೇವೆ ಎಂದು ಜನರಿಂದ ಪ್ರತಿಜ್ಞೆಯನ್ನು ಮಾಡಿಸಲು  ವಿಶ್ವ ಹಿಂದೂ ಪರಿಷದ್ ಯೋಜಿಸಿದೆ. ಈ ರೀತಿಯ ಕಾರ್ಯಕ್ರಮಗಳನ್ನು  ಈ ಹಿಂದೆ ಸಹ ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿತ್ತು. ರಾಮ ಜನ್ಮೋತ್ಸವದ ಅಂಗವಾಗಿ ಸುಂದರ ಕಾಂಡದ ಪಠನ, ಸಾಧುಸಂತರಿಂದ ಧರ್ಮೋಪದೇಶ, ಮತ್ತು ಯಜ್ಞಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. 
 
ಪ್ರಸ್ತುತ ನಡೆಯುತ್ತಿರುವ ಹಿಂದೂ ಸಮ್ಮೇಳನಗಳು ದೇಶದಾದ್ಯಂತ ಮೊಹಲ್ಲಾ ಸಮಿತಿಗಳ ಸಂಖ್ಯೆಯನ್ನು ಒಂದು ಲಕ್ಷಕ್ಕೆ  ಹೆಚ್ಚಿಸಿವೆ. ಮೊಹಲ್ಲಾ ಸಮಿತಿ ಮಟ್ಟದಲ್ಲಿ ರಾಮ ಜನ್ಮಮಹೋತ್ಸವಗಳನ್ನು ನಡೆಸುವುದರ ಉದ್ದೇಶವೇನೆಂದರೆ ವಿಎಚ್‌ಪಿ ಜತೆಗೆ ರಾಮಜನ್ಮಭೂಮಿ ಚಳುವಳಿಯಲ್ಲಿ ಭಾಗವಹಿಸುತ್ತೇವೆ ಎಂದು ಪ್ರತಿಜ್ಞೆಗೈಯ್ಯಲು ಮನವಿ ಮಾಡುವುದಾಗಿದೆ ಎಂದು ವಿಹಿಂಪದ ಪ್ರಧಾನ ಕಾರ್ಯದರ್ಶಿ ಜೈನ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ