ಗೆಳೆಯನ ಮುಂದೆ ಅಪಮಾನಿಸಿದ ಪತ್ನಿಯನ್ನು ಹತ್ಯೆಗೈದ ಪತಿ ಮಹಾಶಯ
ಶನಿವಾರ, 25 ಏಪ್ರಿಲ್ 2015 (14:43 IST)
ಊಟ ನೀಡಲು ನಿರಾಕರಿಸಿದ ಪತ್ನಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಉದ್ಯಮಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಗರದ ಪೊಲೀಸರು ಉದ್ಯಮಿ ಸಚಿನ್ ಉಪ್ಪಲ್ ಮತ್ತು ಹತ್ಯೆಯನ್ನು ತಡೆಯಲು ಪ್ರಯತ್ನಿಸದ ಅವರ ಗೆಳೆಯ ರಾಕೇಶ್ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮಾಜಿ ಗಗನ ಸಖಿಯಾಗಿದ್ದ 28 ವರ್ಷ ವಯಸ್ಸಿನ ಪತ್ನಿ ರಿತು ಸರಿನ್ಳನ್ನು ತಲೆದಿಂಬನ್ನು ಆಕೆಯ ಮುಖಕ್ಕೆ ಒತ್ತಿಹಿಡಿದು ಹತ್ಯೆ ಮಾಡಿರುವುದಾಗಿ ಪತಿ ಸಚಿನ್ ಪೊಲೀಸರಿಗೆ ತಿಳಿಸಿದ್ದಾನೆ. ರಾಮನಾಥಪುರ್ ಪ್ರದೇಶದಲ್ಲಿರುವ ನಿವಾಸದಲ್ಲಿ ಘಟನೆ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ಸಚಿನ್ ಮತ್ತು ರಾಕೇಶ್ ಕಂಠಪೂರ್ತಿ ಕುಡಿದು ಮನೆಗೆ ಬಿರಿಯಾನಿ ಊಟದ ಪಾರ್ಸೆಲ್ ತೆಗೆದುಕೊಂಡು ಬಂದಿದ್ದರು. ಆದರೆ, ರಿತು ಟೆಲಿವಿಜನ್ ನೋಡುತ್ತಿದ್ದರಿಂದ ಅವರಿಗೆ ಊಟವನ್ನು ಬಡಿಸಲು ನಿರಾಕರಿಸಿದ್ದಾಳೆ.
ಇದರಿಂದ ಆಕ್ರೋಶಗೊಂಡ ಪತಿ ಸಚಿನ್, ಆಕೆಯ ಕೈಯಿಂದ ರಿಮೋಟ್ ತೆಗೆದುಕೊಂಡು ಚಾನೆಲ್ ಬದಲಿಸಿದ್ದಾನೆ. ಗೆಳೆಯ ರಾಕೇಶ್ ಸಮ್ಮುಖದಲ್ಲಿಯೇ ದಂಪತಿಗಳ ನಡುವೆ ವಾಕ್ಸಮರ ನಡೆದಿದೆ.
ಗೆಳೆಯನ ಮುಂದೆ ಅಪಮಾನ ಮಾಡಿದ್ದಾಳೆ ಎಂದು ಭಾವಿಸಿದ ಸಚಿನ್ ಆಕೆಗೆ ಕಪಾಳ ಮೋಕ್ಷ ಮಾಡಿದ್ದಾನೆ. ಗೆಳೆಯ ರಾಕೇಶ್ನಿಗೆ ಮನೆಯಿಂದ ಹೊರಹೊಗುವಂತೆ ಹೇಳಿದ ಸಚಿನ್ ಮನೆಯ ಬಾಗಿಲಿಗೆ ಒಳಗಿನಿಂದ ಬೀಗ ಜಡಿದಿದ್ದಾನೆ. ನಂತರ ಪತ್ನಿ ರಿತುಳ ಹತ್ಯೆ ಮಾಡಿದ್ದಾನೆ.
ದಂಪತಿಗಳ ಜಗಳ ತಾರಕಕ್ಕೇರಿದ್ದರೂ ಮನೆಯ ಬಾಗಿಲನ ಹತ್ತಿರ ನಿಂತಿದ್ದ ರಾಕೇಶ್ ನೆರೆಹೊರೆಯವರಿಗೂ ಕೂಡಾ ಮಾಹಿತಿ ನೀಡಿರಲಿಲ್ಲ.
ಪತ್ನಿ ರಿತುಳ ಹತ್ಯೆ ಮಾಡಿದ ನಂತರ ಸಚಿನ್ ಆಕೆಯ ಸಂಬಂಧಿಕರಿಗೆ ಕರೆ ಮಾಡಿ ರಿತು ಪ್ರಜ್ಞೆ ತಪ್ಪಿಬಿದ್ದಿದ್ದಾಳೆ ಎಂದು ಮಾಹಿತಿ ನೀಡಿದ್ದಾನೆ. ಸಂಬಂಧಿಕರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರಂಭದಲ್ಲಿ ನಾನು ಅವಳ ಕೆನ್ನೆಗೆ ಬಾರಿಸಿದ್ದೇನೆ. ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರಿಗೆ ಸುಳ್ಳು ಮಾಹಿತಿ ನೀಡುವ ಪ್ರಯತ್ನ ಮಾಡಿದ್ದಾನೆ.ಆದರೆ, ಪೊಲೀಸರ ವಿಚಾರಣೆಯಿಂದ ಕಂಗಾಲಾಗಿ ಹತ್ಯೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದ್ದಾನೆ.
ನಮ್ಮ ಮಗಳಿಗೆ ವರದಕ್ಷಿಣೆ ತರುವಂತೆ ಮತ್ತು ಆಸ್ತಿಯಲ್ಲಿ ಪಾಲು ಕೊಡುವಂತೆ ಅಳಿಯ ಸಚಿನ್ ತುಂಬಾ ಪೀಡಿಸುತ್ತಿದ್ದ ಎಂದು ಹತ್ಯೆಯಾದ ರಿತುಳ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.
ಆರೋಪಿ ಸಚಿನ್ನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.