ಚೇಡಿಸಿದವನನ್ನು ಕಚ್ಚಿ ಕೊಂದ ಒಂಟೆ

ಬುಧವಾರ, 21 ಜನವರಿ 2015 (10:49 IST)
ರಾಜು ಎಂಬ ಹೆಸರಿನ ಒಂಟೆಯೊಂದು 45 ವರ್ಷದ ವ್ಯಕ್ತಿಯ ತಲೆಗೆ ಮಾರಕವಾಗಿ ಕಚ್ಚಿದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ ಅಪರೂಪದ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. 
ಗೋವಿಂದ್ ತ್ರಿವೇದಿ ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ. 
 
ಒಂಟೆಯ ಕೆರ್ ಟೇಕರ್ ಫೂಲಾ ಮೆನಾನನ್ನು ಭೇಟಿಯಾಗಲು ಬಂದಿದ್ದ ಆತನ ಸ್ನೇಹಿತ ಗೋವಿಂದ್ ತ್ರಿವೇದಿ ಸುಮ್ಮನೆ ಮಲಗಿದ್ದ ಒಂಟೆಯನ್ನು ಸುಖಾಸುಮ್ಮನೆ ಕೆಣಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ಒಂಟೆ ಆತನ ತಲೆಗೆ ಬಲವಾಗಿ ಕಚ್ಚಿದೆ.  ಆತನ ಕಿರುಚಾಟವನ್ನು ಕೇಳಿದ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿ ಬಂದು ಆತನನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಒಂಟೆ ಹಿಡಿತವನ್ನು ಸಡಲಿಸಲಿಲ್ಲ. ಪರಿಣಾಮ ಆತ ಅಸುನೀಗಿದ್ದಾನೆ. ಸ್ನೇಹಿತನನ್ನು ಉಳಿಸಲು ಪ್ರಯತ್ನಿಸಿದ ಫೂಲಾ ಮೆನಾ ಕಾಲಿಗೂ ಸಹ ಒಂಟೆ ಬಲವಾಗಿ ಕಚ್ಚಿದೆ.
 
ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಬಾಪುನಗರ ಪೊಲೀಸ್ ಠಾಣಾಧಿಕಾರಿ ಪಿ.ಡಿ. ಪರ್ಮಾರ್ ತ್ರಿವೇದಿ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 
 
ಪ್ರಕರಣದ ಕುರಿತು ತನಿಖೆ ಪ್ರಾರಂಭಿಸಲಾಗಿದ್ದು, ಘಟನೆಯಲ್ಲಿ ಒಂಟೆ ಮಾಲೀಕನ ಉದಾಸೀನತೆ ಕಂಡುಬಂದರೆ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪರ್ಮಾರ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ