ನಗದು ಬಹುಮಾನ ಬೇಡಿಕೆ: ಸೈನಾ ನೆಹ್ವಾಲ್ ವಿರುದ್ಧ ಕಿಡಿಕಾರಿದ ಜ್ವಾಲಾ ಗುಟ್ಟಾ

ಗುರುವಾರ, 7 ಆಗಸ್ಟ್ 2014 (16:04 IST)
ಸರಕಾರದಿಂದ ಬರಬೇಕಿದ್ದ ನಗದು ಬಹುಮಾನದ ಕುರಿತು ಸರಕಾರಕ್ಕೆ ಸಾರ್ವಜನಿಕವಾಗಿ ನೆನಪಿಸಿಕೊಟ್ಟಿದ್ದಕ್ಕಾಗಿ ಭಾರತದ ನಂ 1 ಬ್ಯಾಡ್‌ಮಿಂಟನ್ ತಾರೆ ಸೈನಾ ನೆಹವಾಲ್ ಅವರ ಮೇಲೆ, ಇತ್ತೀಚಿಗೆ ಮುಕ್ತಾಯ ಕಂಡ ಕಾಮನ್‌ವೆಲ್ತ್  ಕ್ರೀಡೆಯಲ್ಲಿ ಬೆಳ್ಳಿಯ ಪದಕ ಗೆದ್ದಿರುವ ಜ್ವಾಲಾ ಗುಟ್ಟಾ ಛೀಮಾರಿ ಹಾಕಿದ್ದಾರೆ. 

2102ರ ಲಂಡನ್ ಓಲಂಪಿಕ್ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕೆ ಬಹುಮಾನವಾಗಿ ಸರಕಾರ ಘೋಷಿಸಿದ್ದ ನಗದು ಹಣ ಇನ್ನುವರೆಗೂ ತಮ್ಮ ಕೈ ಸೇರದಿದ್ದುದಕ್ಕೆ ಸೈನಾ ಸಾರ್ವಜನಿಕವಾಗಿ ಅಸಮಧಾನ ವ್ಯಕ್ತಪಡಿಸಿದ್ದರು. 
 
ಹಿಂದಿನ ಆಂಧ್ರ ಸರಕಾರ ಸೈನಾರವರಿಗೆ  50 ಲಕ್ಷ ನಗದನ್ನು ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿತ್ತು 
 
ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಜ್ವಾಲಾ, ಸೈನಾ ಸಂಬಂಧಿತ ಸಚಿವರನ್ನು ವೈಯಕ್ತಿಕವಾಗಿ  ಭೇಟಿಯಾಗಿ ಈ ಕುರಿತು ಮಾತನಾಡಬೇಕು. ಇಂತಹ ವಿಷಯಗಳನ್ನು ಸಾರ್ವಜನಿಕವಾಗಿ ಮಾತನಾಡುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ. 
 
ಈ ಕುರಿತು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೆಂದು ನನಗೆ ತಿಳಿಯುತ್ತಿಲ್ಲ. ಸೈನಾ ಎನ್ನುವುದು ತುಂಬ ಹೆಸರುವಾಸಿ ಹೆಸರು. ಆಕೆ ಮುಖ್ಯಮಂತ್ರಿ ಅಥವಾ ಬೇರೆ ಸಚಿವರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದರೆ ಅವರು ಆಕೆಗೆ ಸಹಾಯ ಮಾಡುತ್ತಿದ್ದರೇನೋ. ನನಗೆ ಅಂತಹ ಸಮಸ್ಯೆಗಳು ಎದುರಾಗಿದ್ದರೆ ನಾನು ಸಂಬಂಧಿಸಿದವರನ್ನು  ಖಾಸಗಿಯಾಗಿ ಭೇಟಿಯಾಗಿ ಬಗೆಹರಿಸಿಕೊಳ್ಳುತ್ತಿದ್ದೆ. ಇಂತಹ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ ಎಂದು ಜ್ವಾಲಾ ಗುಟ್ಟಾ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ