ಪೆಯಿಕರಂಬು ಮೈದಾನದತ್ತ ಕಲಾಂ ಪಾರ್ಥಿವ ಶರೀರ

ಗುರುವಾರ, 30 ಜುಲೈ 2015 (11:06 IST)
ಕಳೆದ ಮೂರು ದಿನಗಳ ಹಿಂಗೆ ಅಚಾನಕ್ ಆಗಿ ನಮ್ಮನ್ನಗಲಿದ ಮಾಜಿ ರಾಷ್ಟ್ರಪತಿ, ಅಬ್ದುಲ್ ಕಲಾಂ ಅವರ ಅಂತಿಮ ಯಾತ್ರೆ ಪ್ರಾರಂಭವಾಗಿದೆ. ಸೇನಾ ವಿಶೇಷ ವಾಹನದಲ್ಲಿ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತಿದೆ . ರಸ್ತೆಯ ಇಕ್ಕೆಲಗಳಲ್ಲಿ ನಾಲ್ಕುವರೆ ಕಿಲೋಮೀಟರ್‌ವರೆಗೆ ಜನರು ಕಲಾಂ ಪಾರ್ಥಿವ ಶರೀರದ ಜತೆ ಪಯಣಿಸುತ್ತಿದ್ದಾರೆ.
 
ಕಲಾಂ ನಿವಾಸ ಕಲಾಂ ಇಲ್ಲಂನಿಂದ 5 ಕಿಲೋಮೀಟರ್ ದೂರದಲ್ಲಿರುವ ಪೆಯಿಕರಂಬು ಗ್ರಾಮದತ್ತ ತೆರಳುತ್ತಿರುವ ಪಾರ್ಥಿವ ಶರೀರವನ್ನು ಕೊಂಡೊಯ್ಯುತ್ತಿರುವ ವಾಹನವನ್ನು ಹಿಂಬಾಲಿಸಿರುವ ಅಪಾರ ಸಂಖ್ಯೆಯ ಅಭಿಮಾನಿಗಳು ಕಲಾಂ ಪರ ಘೋಷಣೆಗಳು ಕೂಗುತ್ತ, ಪುಷ್ಪಗಳನ್ನು ಚೆಲ್ಲುತ್ತ ಮುಂದುವರೆಯುತ್ತಿದ್ದಾರೆ. 
 
ತಂಗಚಿಮದಮ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪೆಯಿಕರುಂಬು ಮೈದಾನದತ್ತ ಕಲಾಂ ಪಾರ್ಥಿವ ಶರೀರದ ಅಂತಿಯ ಯಾತ್ರೆ ಸಾಗುತ್ತಿದೆ. 
 
ತಮಿಳುನಾಡಿನ ಹಣಕಾಸು ಸಚಿವರಾದ ಪನ್ನೀರ್ ಸೆಲ್ವಂ ಅಂತ್ಯಕ್ರಿಯೆಗೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ.

 ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಸೇರಿದಂತೆ ಕೇಂದ್ರದ ಅನೇಕ ಸಚಿವರು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೇರಿದಂತೆ ಹಲವು ಗಣ್ಯರು ಈಗಾಗಲೇ ಪೆಯಿಕರುಂಬು ಮೈದಾನವನ್ನು ತಲುಪಿದ್ದಾರೆ. ಪ್ರಧಾನಿ ಮೋದಿ ಸಹ ಕಲವೇ ಕ್ಷಣಗಳಲ್ಲಿ ಸ್ಥಳಕ್ಕಾಗಮಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ