ಮೇಘಾಲಯದ ಶಿಲಾಂಗ್ನ ಐಐಎಂನಲ್ಲಿ ನಿನ್ನೆ ಸಂಜೆ ಉಪನ್ಯಾಸ ನೀಡುತ್ತಿದ್ದಾಗ ಕುಸಿದು ಬಿದ್ದು ಕೊನೆಯುಸಿರೆಳೆದ ಭಾರತದ ಹೆಮ್ಮೆಯ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಅಂತ್ಯ ಸಂಸ್ಕಾರ ವಿಚಾರದಲ್ಲಿದ್ದ ಗೊಂದಲ ನಿವಾರಣೆಯಾಗಿದೆ. ಅವರ ಅಂತ್ಯಸಂಸ್ಕಾರವನ್ನು ಹುಟ್ಟೂರು ರಾಮೇಶ್ವರಂನಲ್ಲೇ ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಕಲಾಂ ಅಂತ್ಯ ಸಂಸ್ಕಾರವನ್ನು ದೆಹಲಿಯಲ್ಲಿ ನಡೆಸಬೇಕೋ ಅಥವಾ ಅವರ ಹುಟ್ಟೂರಾದ ತಮಿಳುನಾಡಿನ ರಾಮೇಶ್ವರಂನಲ್ಲಿ ನಡೆಸುವುದೋ ಎಂಬುದು ಗೊಂದಲವನ್ನು ಸೃಷ್ಟಿಸಿತ್ತು. ಈ ಕುರಿತು ನಿರ್ಧರಿಸಲು ಕೇಂದ್ರ ಸರ್ಕಾರ ಬೆಳಿಗ್ಗೆ 10.30ಕ್ಕೆ ತುರ್ತು ಸಂಪುಟ ಸಭೆಯನ್ನು ಕರೆದಿತ್ತು. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಬಳಿಕ ಅವರ ಕುಟುಂಬಸ್ಥರ ಒತ್ತಾಯವನ್ನು ಪರಿಗಣಿಸಿ ರಾಮೇಶ್ವರಂನಲ್ಲೇ ಅವರ ಅಂತ್ಯಸಂಸ್ಕಾರವನ್ನು ನಡೆಸುವುದೆಂದು ತೀರ್ಮಾನಿಸಲಾಗಿದೆ.