ಮುಂಬೈ: ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಯ ನೀರಸ ಸಾಧನೆಗೆ ಶಿವಸೇನೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇದು ದೊಡ್ಡ ಪಾಠ ಎಂದು ತಿಳಿಸಿದೆ. ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಬರೆದ ಲೇಖನದಲ್ಲಿ, ಇದು ಮಹಾರಾಷ್ಟ್ರ ಚುನಾವಣೆಗೆ ದೊಡ್ಡ ಪಾಠವಾಗಿದೆ. ನಮ್ಮ ಪಾದಗಳನ್ನು ನೆಲದ ಮೇಲೆ ಊರಬೇಕು. ಈ ಫಲಿತಾಂಶಗಳು ಅಚ್ಚರಿಯಲ್ಲದೇ ಅನಿರೀಕ್ಷಿತವಾಗಿದೆ ಎಂದು ಹೇಳಿದೆ.
ಬಿಜೆಪಿಗೆ ಉತ್ತರಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ಭದ್ರಕೋಟೆಗಳಲ್ಲಿ ತೀವ್ರ ಪೆಟ್ಟು ಬಿದ್ದಿದ್ದು, ಅದರ ಕೈವಶದಲ್ಲಿದ್ದ 23 ಸೀಟುಗಳ ಪೈಕಿ 13 ಸೀಟುಗಳನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದೆ.
ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ತರ ಕೆಲಸ ಮಾಡಿದ್ದಾರೆ. ಮೋದಿ ಅವರು 100 ದಿನಗಳಲ್ಲಿ ಮಾಡಿದ ಕೆಲಸ ವ್ಯಾಪಿಸದಿದ್ದರೆ ಯಾರನ್ನು ದೂರಬೇಕು ಎಂದು ಪ್ರಶ್ನಿಸಿದೆ. ಇತ್ತೀಚಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆಗೆ ಸೋನಿಯಾ ಅಥವಾ ರಾಹುಲ್ ಅವರಿಗೆ ಕ್ರೆಡಿಟ್ ನೀಡಬಾರದು. ಅದೇರೀತಿ, ಈ ಫಲಿತಾಂಶಗಳು ಮೋದಿ ವಿರುದ್ಧ ಜನಾದೇಶ ಎಂದು ಯಾರೂ ಭಾವಿಸಬಾರದು ಎಂದು ತಿಳಿಸಿದೆ.