ಶುಕ್ರವಾರ ಛತ್ರಪುರ ಮತ್ತು ದೇವಲಿ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಕೇಜ್ರಿವಾಲ್, "ಸದ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಡೆಯವರು ನಿಮಗೆ ಹಣ ನೀಡಲು ಬರಲಿದ್ದಾರೆ. ನೀವು ಆ ಹಣವನ್ನು ನಿರಾಕರಿಸಬೇಡಿ. ಅವರು ನಿಮಗೆ ಅಕ್ಕಿ ಅಥವಾ ಕಂಬಳಿಯನ್ನು ಸಹ ಕೊಡಬಹುದು. ಅವೆಲ್ಲವನ್ನು ಪಡೆದುಕೊಳ್ಳಿ. ಆದರೆ ಮತವನ್ನು ಮಾತ್ರ ಆಮ್ ಆದ್ಮಿ ಪಕ್ಷಕ್ಕೆ ನೀಡಿ", ಎಂದು ಜನರಿಗೆ ಸಲಹೆ ನೀಡಿದ್ದಾರೆ.
ಕಳೆದ ವಾರ ಸಹ ಅವರು ಈ ಹೇಳಿಕೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಜನವರಿ 27 ರವರೆಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ. ಆದರೆ ಈ ಕುರಿತು ತಲೆಕೆಡಿಸಿಕೊಳ್ಳದ ಕೇಜ್ರಿವಾಲ್ ತಮ್ಮ ಮಾತನ್ನು ಪುನರಾವರ್ತಿಸಿದ್ದಾರೆ.