ಕೇರಳ ಸಿಎಂ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ 2 ತಿಂಗಳ ತಡೆಯಾಜ್ಞೆ

ಶುಕ್ರವಾರ, 29 ಜನವರಿ 2016 (19:02 IST)
ಸೋಲಾರ ಹಗರಣದಲ್ಲಿ ವಿಚಕ್ಷಣ ನ್ಯಾಯಾಲಯ ಸಿಎಂ ಓಮನ್ ಚಾಂಡಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನೀಡಿದ ಆದೇಶಕ್ಕೆ ಕೇರಳ ಹೈಕೋರ್ಟ್ ಎರಡು ತಿಂಗಳ ತಡೆಯಾಜ್ಞೆ ನೀಡಿದೆ.
 
ನಿನ್ನೆ ವಿಚಕ್ಷಣ ನ್ಯಾಯಾಲಯ ಸಿಎಂ ಚಾಂಡಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶ ನೀಡಿದ್ದರಿಂದ ವಿಪಕ್ಷಗಳು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವಂತೆ ಭಾರಿ ಒತ್ತಡ ಹೇರಿದ್ದವು.
 
ಅದರಂತೆ, ಇಂಧನ ಖಾತೆ ಸಚಿವ ಆರ್ಯದಾನ್ ಮುಹಮ್ಮದ್ ವಿರುದ್ಧದ ಎಫ್ಐರ್ ದಾಖಲಿಕೆಗೆ ತಡೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. 
 
ಮಾಧ್ಯಮ ವರದಿಗಳ ಪ್ರಕಾರ, ವಿಚಕ್ಷಣ ನ್ಯಾಯಾಲಯದ ನ್ಯಾಯಮೂರ್ತಿ ಎಸ್‌ಎಸ್ ವಾಸನ್ ಬೇಜವಾಬ್ದಾರಿಯ ತೀರ್ಪು ನೀಡಿದ್ದಾರೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಪಿ.ಉಬೈದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಮಹತ್ವದ ವಿಷಯವೆಂದರೆ, ವಿಚಕ್ಷಣ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಸಿಎಂ ಚಾಂಡಿ ಮತ್ತು ಮುಹ್ಹಮದ್ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.
 
ಸರಿತಾ ನಾಯರ್ ಎನ್ನುವ ಮಹಿಳೆ ಮುಖ್ಯಮಂತ್ರಿ ಓಮನ್ ಚಾಂಡಿಯವರಿಗೆ 1.90 ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾಗಿ ಮತ್ತು ಮುಹಮ್ಮದ್ ಅವರಿಗೆ 40 ಲಕ್ಷ ರೂಪಾಯಿಗಳ ಲಂಚ ನೀಡಿದ್ದಾಗಿ ಆರೋಪಿಸಿ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರಿಂದ ವಿಚಕ್ಷಣ ನ್ಯಾಯಾಲಯ ಇವರಿಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿತ್ತು.
 
ಏತನ್ಮಧ್ಯೆ, ಮುಖ್ಯಮಂತ್ರಿ ಓಮನ್ ಚಾಂಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಭಾರಿ ಪ್ರತಿಭಟನೆಯಲ್ಲಿ ತೊಡಗಿವೆ.

ವೆಬ್ದುನಿಯಾವನ್ನು ಓದಿ