ಪ್ರಧಾನಿ ಮೋದಿ ಹುದ್ದೆಯಿಂದ ಕೆಳಗಿಳಿಯುವವರೆಗೆ ಇನ್ನರ್ಧ ತಲೆಬೋಳಿಸಿಕೊಳ್ಳಲ್ಲ: ಯಾಹ್ಯಾ ಪ್ರತಿಜ್ಞೆ

ಮಂಗಳವಾರ, 29 ನವೆಂಬರ್ 2016 (13:23 IST)
ಕೇರಳದಲ್ಲಿ ಪ್ರತಿಭಟನೆಗಳು ಸರ್ವೇಸಾಮಾನ್ಯ. ಆದರೆ, ನೋಟು ನಿಷೇಧ ಕುರಿತಂತೆ ಎಡಪಕ್ಷಗಳು ಕರೆದಿದ್ದ ಪ್ರತಿಭಟನೆಯಲ್ಲಿ ವಿಚಿತ್ರವೊಂದು ನಡೆದಿದೆ. 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ತನ್ನ ಅರ್ಧ ತಲೆಯನ್ನು ಬೋಳಿಸಿಕೊಂಡಿದ್ದು, ಪ್ರಧಾನಿ ಮೋದಿ ಅಧಿಕಾರದಿಂದ ನಿರ್ಗಮಿಸುವವರೆಗೆ ಇನ್ನರ್ಧ ತಲೆ ಬೋಳಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾನೆ.
 
ಕೊಲ್ಲಂ ಜಿಲ್ಲೆಯ ಕಡಕ್ಕಲ್ ನಿವಾಸಿಯಾಗಿರುವ ಅನಕ್ಷರಸ್ಥ ಯಾಹ್ಯಾ ಮಧ್ಯ ಪ್ರಾಚ್ಯ ರಾಷ್ಟ್ರದಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ನಂತರ ಕೇರಳಕ್ಕೆ ಬಂದು ತನ್ನಲ್ಲಿದ್ದ ಹಣವು ಸೇರಿದಂತೆ ಸಹಕಾರ ಬ್ಯಾಂಕ್‌ನಲ್ಲಿ ಸಾಲ ಪಡೆದು ಕ್ಯಾಂಟಿನ್ ಆರಂಭಿಸಿದ. ಆದರೆ, ತನ್ನಲ್ಲಿದ್ದ 500 ಮತ್ತು 1000 ರೂ ನೋಟುಗಳಿದ್ದ 23 ಸಾವಿರ ರೂಪಾಯಿಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದ.
 
ನವೆಂಬರ್ 8 ರಂದು ಪ್ರಧಾನಿ ಮೋದಿಯ ನೋಟು ನಿಷೇಧ ಘೋಷಣೆಯ ನಂತರ ಯಾಹ್ಯಾ ಆಘಾತಗೊಂಡ. ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿರುವ ಖಾತೆ ಬಿಟ್ಟರೆ ಆತನ ಬಳಿ ಬೇರೆ ಬ್ಯಾಂಕ್‌ನಲ್ಲಿ ಖಾತೆಯಿರಲಿಲ್ಲ. ಕೋ-ಆಪರೇಟಿವ್ ಬ್ಯಾಂಕ್‌ಗಳಲ್ಲಿ ನೋಟು ವರ್ಗಾವಣೆಗೆ ಅವಕಾಶವಿರಲಿಲ್ಲ. 
 
ಕಳೆದ ಎರಡು ದಿನಗಳಿಂದ ನೋಟು ಬದಲಾವಣೆಗಾಗಿ ಬ್ಯಾಂಕ್‌ ಸರದಿಯಲ್ಲಿ ನಿಂತಿದ್ದ. ಎರಡನೇ ದಿನ ಬ್ಯಾಂಕ್ ಸರದಿಯಲ್ಲಿ ನಿಂತಾಗ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ನಾನು ನನ್ನ ಕಠಿಣ ಪರಿಶ್ರಮದಿಂದ ದುಡಿದ ಹಣವನ್ನು ವರ್ಗಾಯಿಸಲು ಎಷ್ಟು ದಿನಗಳ ಕಾಲ ನಾನು ಬ್ಯಾಂಕ್‌ ಮುಂದೆ ಕ್ಯೂ ಗಾಗಿ ನಿಂತಿರುವುದು ಎಂದು ಯೋಚಿಸಿ ಆಸ್ಪತ್ರೆಯಿಂದ ಬಂದ ಕೂಡಲೇ ಹಳೆಯ 23 ಸಾವಿರ ರೂಪಾಯಿಗಳನ್ನು ಸುಟ್ಟು ಹಾಕಿ ಪಕ್ಕದಲ್ಲಿರುವ ಕಟಿಂಗ್ ಸಲ್ಯೂನ್‌ಗೆ ಹೋಗಿ ಅರ್ಧ ತಲೆಯನ್ನು ಬೋಳಿಸಿಕೊಂಡಿದ್ದಾನೆ.
 
ಮೋದಿಯವರೇ ನೀವು ನನ್ನ ಉಳಿತಾಯದ ಹಣವನ್ನು ಬೂದಿಯಾಗಿಸಿದ್ದೀರಿ. ಜನತೆ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ನನ್ನ ಇನ್ನರ್ಧ ತಲೆಯನ್ನು ಬೋಳಿಸಿಕೊಳ್ಳುವುದಿಲ್ಲ ಎಂದು ಯಾಹ್ಯಾ ಪ್ರತಿಜ್ಞೆ ಮಾಡಿದ್ದಾನೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ