ದೆಹಲಿಯನ್ನು ವಿಶ್ವದರ್ಜೆಯ ನಗರವನ್ನಾಗಿಸುತ್ತೇನೆ: ಕಿರಣ್ ಬೇಡಿ ವಾಗ್ದಾನ

ಮಂಗಳವಾರ, 27 ಜನವರಿ 2015 (13:32 IST)
ನವದೆಹಲಿಯನ್ನು ವಿಶ್ವದರ್ಜೆಯ ನಗರವನ್ನಾಗಿಸುವುದು ತಾವು ಹೆಚ್ಚಿನ ಆದ್ಯತೆ ನೀಡುವ ವಿಷಯಗಳಲ್ಲೊಂದು ಎಂದು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಹೇಳಿದ್ದಾರೆ. 
 
ಕಳೆದ ಕೆಲ ದಿನಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಮಾಜಿ ಪೊಲೀಸ್ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತೆ ಕಿರಣ್ ಬೇಡಿ, “ ದೆಹಲಿಯನ್ನು ವಿಶ್ವದರ್ಜೆಯ ನಗರವನ್ನಾಗಿಸುವುದು ಮತ್ತು ಪ್ರತಿಯೊಬ್ಬರ  ಜೀವನಮಟ್ಟವನ್ನು ಹೆಚ್ಚಿಸಲು ಪೂರಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ನಾನು ಮೊದಲ ಆದ್ಯತೆ ನೀಡುತ್ತೇನೆ ಎಂದು ಟ್ವಿಟ್ ಮಾಡಿದ್ದಾರೆ.”
 
ದೆಹಲಿಯಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಪ್ರಬಲ ಸವಾಲಾಗಿ ಬೆಳೆದು ನಿಂತಿರುವ ಆಪ್‌ಗೆ ಸೆಡ್ಡು ಹೊಡೆಯಲು ಬಿಜೆಪಿ ಕಿರಣ್ ಬೇಡಿಯನ್ನು ಪಕ್ಷಕ್ಕೆ ಕರೆ ತಂದಿದೆ.
 
ಕಳೆದ ವಾರ ಕಿರಣ್ ಬೇಡಿಯನ್ನು ಹೊಗಳಿದ್ದ ಆಪ್‌ನ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ಶಾಂತಿಭೂಷಣ್, "ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಮಾಸ್ಟರ್ ಸ್ಟ್ರೋಕ್. ಮುಖ್ಯಮಂತ್ರಿಯಾಗಿ ಅವರು ಆಪ್ ನಾಯಕ ಕೇಜ್ರಿವಾಲ್‌ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಬಹುದು", ಎಂದು ಹೇಳಿದ್ದರು. 

ವೆಬ್ದುನಿಯಾವನ್ನು ಓದಿ