ನಡುರಸ್ತೆಯಲ್ಲಿ ಧಗಧಗಿಸಿದ ಸರ್ಕಾರಿ ಬಸ್: ಮಹಿಳೆ ಸಜೀವ ದಹನ

ಮಂಗಳವಾರ, 21 ಫೆಬ್ರವರಿ 2017 (08:02 IST)
ಚಿಕ್ಕಮಗಳೂರಿನಿಂದ ಬೆಂಗಳೂರಿನ ಕಡೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಒಬ್ಬ ಮಹಿಳೆ ಮೃತಪಟ್ಟು ಇನ್ನಿಬ್ಬರು ಗಾಯಗೊಂಡ ಘಟನೆ ಬೆಂಗಳೂರಿನ ನೆಲಮಂಗಲದ ಬಳಿ ನಡೆದಿದೆ.

ನಿನ್ನೆ ರಾತ್ರಿ 12ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.


 
ಮೊದಲು ಎಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಬಸ್‌ನ್ನೆಲ್ಲಾ ವ್ಯಾಪಿಸಿದೆ. ಪರಿಣಾಮ ಬಸ್‌ನಲ್ಲಿದ್ದ 50 ವರ್ಷದ ಭಾಗ್ಯಮ್ಮ ಎಂಬುವವರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಉಳಿದ 25ಕ್ಕೂ ಹೆಚ್ಚು ಜನರು ಅಪಾಯದಿಂದ ಪಾರಾಗಿದ್ದಾರೆ.
 
ಗಾಯಗೊಂಡವರಲ್ಲಿ ಕೆಂಗೇರಿ ನಿವಾಸಿ ಮಮತಾ ಎನ್ನುವವರ ಸ್ಥಿತಿ ಚಿಂತಾಜನಕವಾಗಿದ್ದು  70% ಸುಟ್ಟು ಹೋಗಿರುವ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ಕಿಶನ್ ಎಂಬ ಬಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಆತನನ್ನು ಸಹ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
 
ಮೃತ ಭಾಗ್ಯಮ್ಮ 8ನೇ ಮೈಲಿ ನಿವಾಸಿಯಾಗಿದ್ದು  ತಮ್ಮ ಸಂಬಂಧಿಕರ ಅಂತ್ಯ ಸಂಸ್ಕಾರಕ್ಕಾಗಿ ಚಾಮರಾಜನಗರಕ್ಕೆ ಹೋಗಿ ಮರಳುತ್ತಿದ್ದರು.
 
ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಸಫಲರಾಗಿದ್ದಾರೆ. ಆದರೆ ಅಲ್ಲಿಯವರೆಗೆ ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿತ್ತು.
 
ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ