ಲಾಲು ಸೂಪರ್ ಮುಖ್ಯಮಂತ್ರಿ, ನಿತೀಶ್ ಕೇವಲ ಕೈಗೊಂಬೆ: ಬಿಜೆಪಿ ಲೇವಡಿ

ಶನಿವಾರ, 30 ಜನವರಿ 2016 (14:31 IST)
ಬಿಹಾರ್ ರಾಜ್ಯದಲ್ಲಿ ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸೂಪರ್ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಕೇವಲ ಲಾಲು ಕೈಗೊಂಬೆಯಾಗಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.
 
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರಕಾರ ಲಾಲು ವಿರುದ್ಧದ ಪ್ರಕರಣಗಳನ್ನು ಹಿಂಪಡೆದುಕೊಳ್ಳುತ್ತಿದೆ. ನಿತೀಶ್ ಕುಮಾರ್ ತಮ್ಮ ಖುರ್ಚಿಯನ್ನು ಉಳಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಹೋಗಲು ಸಿದ್ದ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
 
ರಾಜ್ಯದಲ್ಲಿ ಅಡಳಿತರೂಢ ಪಕ್ಷದ ಹಲವು ಶಾಸಕರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಪರಾಧ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದ್ದರೂ ಸಿಎಂ ನಿತೀಶ್ ಕುಮಾರ್ ಮೌನವಾಗಿರುವುದು ನಾಚಿಕೆಗೇಡಿತನದ ಸಂಗತಿ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ.
 
ಮಹಾಮೈತ್ರಿಯ ಪಾಲುದಾರ ಪಕ್ಷವಾದ ಕಾಗ್ರೆಸ್ ಶಾಸಕರೊಬ್ಬರು ಅಪ್ರಾಪ್ತ ಬಾಲಕಿಯ ಅಪಹರಣದಲ್ಲಿ ಆರೋಪಿಯಾಗಿದ್ದಾರೆ, ಜೆಡಿಯು ಶಾಸಕರು ಡಿಎಸ್‌ಪಿಗೆ ಜೀವ ಬೆದರಿಕೆಯೊಡ್ಡಿದ್ದಾರೆ. ಆರ್‌ಜೆಡಿ ಶಾಸಕ ಪೊಲೀಸರಿಗೆ ಬೆದರಿಕೆ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ. 
 
ರಾಜ್ಯದಲ್ಲಿ ಅಪಹರಣ, ಹತ್ಯೆ, ಜೀವಬೆದರಿಕೆಯಂತಹ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿವೆ. ಲಾಲು ಮತ್ತು ಅವರ ಇಬ್ಬರು ಪುತ್ರರ ವಿರುದ್ಧದ ಪ್ರಕರಣಗಳನ್ನು ಸರಕಾರ ಹಿಂಪಡೆದಿರುವುದು ಹೇಯ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ