ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದು ಪರಷ್ಪರ ಕೆಸರೆರಚಾಟವೂ ಸಹ ಉತ್ತುಂಗಕ್ಕೇರಿದೆ. ಶನಿವಾರ ಬಿಹಾರ್ ಪ್ರವಾಸ್ ಮಾಡಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಟು ವಾಕ್ ಪ್ರಹಾರ್ ಮಾಡಿರುವ ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಮೋದಿ ಪುರಾಣದಲ್ಲಿ ಕುಖ್ಯಾತವಾಗಿರುವ ಕಾಳಿಂಗ ಸರ್ಪದ ಪುನರ್ಜನ್ಮ ಎಂದು ಹೇಳಿದ್ದಾರೆ.
ಶನಿವಾರ ಬಿಹಾರದ ಮುಝಪ್ಫರ್ ನಗರದಲ್ಲಿ ಪ್ರಚಾರ ಕೈಗೊಂಡಿದ್ದ ಮೋದಿಯವರು ಎನ್ಡಿಎ ಮೈತ್ರಿಕೊಟಕ್ಕೆ ಬಹುಮತದಿಂದ ಗೆಲ್ಲಿಸಿ ತನ್ನಿ ಎಂದು ಮನವಿ ಮಾಡಿಕೊಂಡಿದ್ದನ್ನು ಉಲ್ಲೇಖಿಸಿದ ಲಾಲು, `ದ್ವಾಪರ ಯುಗದಲ್ಲಿ ಕೃಷ್ಣ ಕಾಳಿಂಗ ಸರ್ಪವನ್ನು ಮರ್ದನ ಮಾಡಿದ್ದ. ಅದು ನರೇಂದ್ರ ಮೋದಿ ರೂಪದಲ್ಲಿ ಜನ್ಮತಾಳಿ ಗುಜರಾತಿನ ತುಂಬಾ ವಿಷವನ್ನು ಹಬ್ಬಿಸಿತು. ಮತ್ತೀಗ ಬಿಹಾರಕ್ಕೆ ಕಚ್ಚುತ್ತಿದೆ. ನಾವು (ಯದುವಂಶದವರು) ಅವರನ್ನು ಬಿಹಾರ ಚುನಾವಣೆಯಲ್ಲಿ ಅವರನ್ನು ಹೊಸಕಿ ಹಾಕುವುದಷ್ಟೇ ಅಲ್ಲ. ಬಿಹಾರದಿಂದ ಅವರ ಪಕ್ಷವನ್ನು ಸಂಪೂರ್ಣವಾಗಿ ಹೊರ ದಬ್ಬುತ್ತೇವೆ' ಎಂದಿದ್ದಾರೆ.
ಲಾಲು ಪ್ರಸಾದ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಲಾಲು ಅವರ ಜತೆ ಅಪವಿತ್ರ ಮೈತ್ರಿ ಬೆಳೆಸಿಕೊಂಡಿರುವ ಬಿಹಾರ್ ಸಿಎಂ ನಿತೀಶ್ ಕುಮಾರ್ ಇತ್ತೀಚಿಗೆ, 'ಚಂದನಕ್ಕೆ ಸುತ್ತಿಕೊಂಡ ನಾಗರಹಾವು', ಎಂದು ಲಾಲು ಅವರನ್ನು ಉದ್ದೇಶಿಸಿ ಟೀಕಿಸಿದ್ದನ್ನು ಅವರು ಮರೆಯಬಾರದು ಎಂದಿದೆ.