ಬದರಿನಾಥ ಹೆದ್ದಾರಿಯಲ್ಲಿ ಭೂಕುಸಿತ: ಸಂಕಷ್ಟಕ್ಕೆ ಸಿಲುಕಿದ 14 ಸಾವಿರ ಯಾತ್ರಾರ್ತಿಗಳು

ಶನಿವಾರ, 20 ಮೇ 2017 (11:49 IST)
ಬದರಿನಾಥ್ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ ಪರಿಣಾಮ ಸುಮಾರು 14 ಸಾವಿರಕ್ಕೂ ಅಧಿಕ ಯಾತ್ರಾರ್ಥಿಗಳು ಅಪಾಯಕ್ಕೆ ಸಿಲುಕಿದ್ದಾರೆ.
 
ಬದರೀನಾಥ್-ಚಾರ್'ದಾಮ್ ಯಾತ್ರಾ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಚಮೋಲಿ ಜಿಲ್ಲೆಯ ವಿಷ್ಣು ಪ್ರಯಾಗದ ಹಾಥಿ ಪರ್ವತ್ ನಲ್ಲಿ ಭೂಕುಸಿತ ಉಂಟಾಗಿದೆ. ಹೃಷಿಕೇಶ-ಬದ್ರಿನಾಥ ರಾಷ್ಟ್ರೀಯ ಹೆದ್ದಾರಿಯ 60 ಮೀಟರ್ ರಸ್ತೆ ಹಾಗೂ ಭೂಕುಸಿತವುಂಟಾದ ಸ್ಥಳದ 150 ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ  ಯಾವೊಬ್ಬ ಯಾತ್ರಾರ್ಥಿಗೂ ಗಾಯಗಳಾಗಿಲ್ಲ.
 
ಭಾರಿ ಬಂಡೆಗಳು ಮತ್ತು ಮಣ್ಣು ರಸ್ತೆಗೆ ಬಿದ್ದಿವೆ. ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಸಿಬ್ಬಂದಿಯು ಹೆದ್ದಾರಿಯಲ್ಲಿ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ.
 
ಇನ್ನು ಭುಕುಸಿತದಿಂದ ತೊಂದರೆಗೆ ಸಿಲುಕಿರುವವರಲ್ಲಿ ಕರ್ನಾಟಕದ 70 ಮಂದಿ ಇದ್ದು, ಅಪಾಯಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಅಲ್ಲಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ