ಕೇಂದ್ರದೊಂದಿಗೆ ನಿರತರ ಜಟಾಪಟಿಯಲ್ಲಿ ತೊಡಗಿರುವ ದೆಹಲಿ ಮುಖ್ಯಮಂತ್ರಿ, ಆಪ್ ನಾಯಕ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಚುನಾವಣೆ ಸೋತಂತೆ ಬಿಹಾರದಲ್ಲೂ ಬಿಜೆಪಿ ಸೋಲನ್ನು ಕಾಣಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ದೆಹಲಿ ಸಾರಿಗೆ ಸಚಿವ ಗೋಪಾಲ್ ರೈ ಆಯೋಜಿಸಿದ್ದ ಈದ್ ಮಿಲಾದ್ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, "ಬಿಜೆಪಿ ಈ ಮೊದಲು ಎಲ್ಲ ಚುನಾವಣೆಗಳನ್ನು ಗೆದ್ದುಕೊಂಡಿತ್ತು. ಆದರೆ ದೆಹಲಿಯಲ್ಲಿ ಗೆಲುವು ಕಂಡುಕೊಳ್ಳಲು ಅವರಿಂದಾಗಲಿಲ್ಲ. ಎಲ್ಲರೂ ಅವರು ತಮ್ಮ ವಿಜಯದ ಅಭಿಯಾನವನ್ನು ಮುಂದುವರೆಸುತ್ತಾರೆ ಎಂಬುದಾಗಿ ಅಂದುಕೊಂಡಿದ್ದರು. ಆದರೆ ಬಳಿಕ ಸತತ ಗೆಲುವಿನ ಬಳಿಕ ಅವರು ದೆಹಲಿಯನ್ನು ಕಳೆದುಕೊಂಡರು. ಈಗ ಬಿಹಾರದಲ್ಲೂ ಅದೇ ಫಲಿತಾಂಶ ಮರುಕಳಿಸಲಿದೆ", ಎಂದು ಹೇಳಿದ್ದಾರೆ.
"ನಾವು 67 ಸೀಟುಗಳನ್ನು ಗೆದ್ದಿದ್ದು, ಕೇಂದ್ರ ಸರ್ಕಾರದ ನಿದ್ದೆಗೆಡಿಸಿದೆ. ನಾವು ದಿನದ 24 ಗಂಟೆಯೂ ಸಾರ್ವಜನಿಕ ಸೇವೆಗೆ ತತ್ಪರರಾಗಿದ್ದೇವೆ. ನಾವು ಮಾಡಿದ್ದ ವಾಗ್ದಾನಗಳನ್ನು ತುಸು ತುಸುವಾಗಿ ಈಡೇರಿಸುತ್ತಿದ್ದೇವೆ", ಎಂದು ಆಪ್ ನಾಯಕ ಹೇಳಿದ್ದಾರೆ.