ಇಂದು ಸಹ ಲೋಕಸಭೆ, ರಾಜ್ಯಸಭೆಗಳು ಕೋಲಾಹಲದಲ್ಲಿಯೇ ಮಿಂದೆದ್ದವು. ಲೋಕಸಭೆಯಲ್ಲಿ ಕಲಾಪ ಪ್ರಾರಂಭವಾಗುತ್ತಿದ್ದಂತೆ ಲಲಿತ್ ಪ್ರಕರಣ ಮತ್ತು ವ್ಯಾಪಂ ಹಗರಣದ ಆರೋಪಿಗಳ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ಎಂದಿನಂತೆ ಗದ್ದಲವನ್ನು ಪ್ರಾರಂಭಿಸಿದವು.
ಸದನದ ಬಾವಿಗಳಿದು ಪ್ರತಿಭಟನೆಗಿಳಿದ ವಿರೋಧ ಪಕ್ಷದ ಸದಸ್ಯರನ್ನು ನಿಯಂತ್ರಿಸುವಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ವಿಫಲರಾದರು. 11 ರಿಂದ 12 ಗಂಟೆಗಳವರೆಗೆ ನಡೆದ ಸದನದಲ್ಲಿ ಕೇವಲ ಕೋಲಾಹಲ, ಪ್ರತಿಭಟನೆಗಳ ಹೊರತಾಗಿ ಯಾವುದೇ ವಿಷಯಗಳು ಚರ್ಚೆಗೆ ಬರಲಿಲ್ಲ.
ರಾಜ್ಯಸಭೆಯಲ್ಲಿ ಕೂಡ ಕಲಾಪ ಆರಂಭವಾಗುತ್ತಿದ್ದಂತೆ ಸುಷ್ಮಾ ರಾಜೀನಾಮೆಗೆ ಒತ್ತಾಯಿಸಿ ವಿರೋಧಪಕ್ಷಗಳು ಪ್ರತಿಭಟನೆ ನಡೆಸಿದವು. ಗದ್ದಲದ ನಡುವೆಯೂ ಸುಷ್ಮಾ ತಮ್ಮ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಥಮ ಬಾರಿಗೆ ಸದನದಲ್ಲಿ ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದರು. ಆದರೆ ಅವರು ತಮ್ಮ ತಪ್ಪಿಲ್ಲ ಎನ್ನುತ್ತಿದ್ದಂತೆ ವಿರೋಧ ಪಕ್ಷಗಳ ಗಲಾಟೆ ಮಿತಿ ಮೀರಿತು. ಸದನ ಬಾವಿಗಿಳಿದ ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದವು.