ಹತ್ಯೆಯಾದವರು ದಂಪತಿಗಳಲ್ಲ; ಪರಾರಿಯಾಗಿ ಬಂದಿದ್ದ ಪ್ರೇಮಿಗಳು

ಭಾನುವಾರ, 5 ಜುಲೈ 2015 (15:56 IST)
ಬೆಂಗಳೂರಿನ ಹೊರವಲಯದ ಹೆಸರಘಟ್ಟ ಬಳಿಯ ವಿನಾಯಕನಗರದಲ್ಲಿ ಕೊಲೆಯಾದ ಯುವಕ ಯುವತಿಯರು ದಂಪತಿಗಳಲ್ಲ. ಪ್ರೇಮಿಗಳು ಎಂದು ಉಪ ಪೊಲೀಸ್ ಆಯುಕ್ತರಾದ ಸುರೇಶ್ ಕುಮಾರ್ ತಿಳಿಸಿದ್ದಾರೆ.  

ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವಿನಾಯಕ ನಗರದ ಮನೆಯೊಂದರಲ್ಲಿ ಬಾಡಿಗೆಗಿದ್ದ ಕೊಪ್ಪಳ ಮೂಲದ ಬಸವರಾಜು (28)ಮತ್ತು ಕಸ್ತೂರಿ (25)ಇಂದು ಮುಂಜಾನೆ ನಿವಾಸದಲ್ಲಿಯೇ ಶವವಾಗಿ ಪತ್ತೆಯಾಗಿದ್ದರು. ಇಬ್ಬರನ್ನೂ ಚಾಕುವಿನಿಂದ ಎಲ್ಲೆಂದರಲ್ಲಿ ತಿವಿದು ಅಮಾನುಷವಾಗಿ ಕೊಲೆ ಮಾಡಲಾಗಿತ್ತು.  
 
ಒಂದೇ ಊರಿನವರಾದ ಕಸ್ತೂರಿ ಹಾಗೂ ಬಸವರಾಜ್, ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮಗಳ ಪ್ರೇಮಕ್ಕೆ ಪೋಷಕರ ವಿರೋಧವಿತ್ತು. ಹೀಗಾಗಿ ಆಕೆಯನ್ನವರು ಬೇರೊಬ್ಬ ಹುಡುಗನ ಜತೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಪ್ರೇಮಿಯನ್ನು ಮರೆಯಲಾಗದೇ ಕಸ್ತೂರಿ ಕಳೆದ 3 ತಿಂಗಳ ಹಿಂದೆ ಆತನ ಜತೆ ಓಡಿ ಬಂದಿದ್ದಳು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. 
 
ಶನಿವಾರ  ರಾತ್ರಿ ಮನೆಗೆ ಬಂದಿದ್ದ ಕಸ್ತೂರಿ ಅಣ್ಣ ಹನುಮಂತರಾಯಪ್ಪನೇ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ನಾಪತ್ತೆಯಾಗಿರುವ ಶಂಕಿತ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ .

ವೆಬ್ದುನಿಯಾವನ್ನು ಓದಿ