ಚಿಟ್ ಫಂಡ್ ಸಂಸ್ಥೆ ಎದುರಿಗೆ ಆತ್ಮಹತ್ಯೆಗೆ ಶರಣಾದ ಹೂಡಿಕೆದಾರ
ಸೋಮವಾರ, 21 ಮಾರ್ಚ್ 2016 (11:32 IST)
ಮಥುರಾ: ಚಿಟ್ ಫಂಡ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದ ಹಣಕ್ಕೆ ಪ್ರತಿಫಲ ಹಾಗೂ ಹೂಡಿಕೆಯ ಹಣವನ್ನು ಮರುಪಾವತಿಸದ ಕಾರಣ ವ್ಯಕ್ತಿಯೊಬ್ಬ ಮನನೊಂದು ಸಂಸ್ಥೆಯ ಎದುರಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಹರಿಯಾಣಾದ ರೆವಾರಿ ನಿವಾಸಿ ಅಭಯ ಸಿಂಗ್ ಎಂದು ಗುರುತಿಸಲಾಗಿದ್ದು, ಪ್ರಕರಣ ಕುರಿತಂತೆ ಸಂಸ್ಥೆಯ ಸಿಎಂಡಿ ಜಿ ಕೆ ಎಸ್ ರಾಣಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದಲ್ಲಿ ಹೂಡಿಕೆದಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಡುತ್ತಿದ್ದಂತೆಯೆ, ಹತ್ತಾರು ಹೂಡಿಕೆದಾರರು ಸಂಸ್ಥೆ ಎದುರಿಗೆ ಪ್ರತಿಭಟನೆ ನಡಿಸಿ, ಸಂಸ್ಥೆಯ ಸಿಎಂಡಿ ರಾಣಾ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಚಿಟ್ ಫಂಡ್ ಸಂಸ್ಥೆ, ನೂರಾರು ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಮಾಡುತ್ತಿದೆ ಎಂದು ಹೂಡಿಕೆದಾರರು ಆರೋಪಿಸಿದ್ದಾರೆ.