ದೆಹಲಿ ಮೆಟ್ರೋ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಭೂಪ

ಗುರುವಾರ, 26 ಮಾರ್ಚ್ 2015 (17:27 IST)
ಮೆಟ್ರೋ ರೈಲಿನ ಮುಂದೆ ಹಾರಿದ್ದ 36 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಗಂಭೀರ ಗಾಯಗಳಿಂದಾಗಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಕ್ಷಿಣ ದೆಹಲಿಯ ದುರ್ಗಾ ವಿಹಾರ್ ನಿವಾಸಿಯಾದ ಅಜಯ್ ಕುಮಾರ್, ಛತ್ತರ್‌ಪುರ್ ಮೆಟ್ರೋ ರೈಲ್ವೆ ನಿಲ್ದಾಣದ ಎರಡನೇ ನಂಬರ್ ಪ್ಲಾಟ್‌ಫಾರ್ಮ್‌ನಿಂದ ರೈಲಿನ ಮುಂದೆ ಹಾರಿದ್ದರಿಂದ ತಲೆ, ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಛತ್ತರ್‌ಪುರ್‌ದಿಂದ ಜಹಾಂಗೀರ್‌ಪುರಿಗೆ ತೆರಳುತ್ತಿದ್ದ ಮೆಟ್ರೋ ರೈಲಿನ ಮುಂದೆ ಅಜಯ್ ಕುಮಾರ್ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಗಂಭೀರವಾಗಿ ಗಾಯಗೊಂಡ ಅಜಯ್ ಕುಮಾರ್‌ನನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ, ವೈದ್ಯರು ಬದುಕುಳಿಯುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ಅಜಯ್ ಕುಮಾರ್ ಬಳಿ ಯಾವುದೇ ಆತ್ಮಹತ್ಯೆ ಪತ್ರ ದೊರೆತಿಲ್ಲವಾದ್ದರಿಂದ ಆತ್ಮಹತ್ಯೆಗೆ ಪ್ರಯತ್ನಿಸಿರುವ ಹಿಂದಿನ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಕುಮಾರ್ ಬಳಿ ಕುಟುಂಬದ ಸದಸ್ಯರ ಸಂಪರ್ಕ ನಂಬರ್ ಕೂಡಾ ದೊರೆಯುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ